ಕುದೂರು: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ನಾಲ್ಕು ದಿನಗಳ ‘ಯುವ ಪರ್ವ’ ಕಾರ್ಯಕ್ರಮವನ್ನು ಈಚೆಗೆ ಕಾಲೇಜಿನ ಪ್ರಾಂಶುಪಾಲ ಗುರುಮೂರ್ತಿ ಕೆ.ಎಚ್. ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದ ಕ್ಷಣಗಳು. ಕಲಿಕೆಯ ಜೊತೆಗೆ ಹಲವಾರು ಕೌಶಲಯಗಳು ಇಂದಿನ ಶಿಕ್ಷಣದಲ್ಲಿ ತೀರ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ‘ಯುವ ಪರ್ವ’ ಎಂಬ ಹೆಸರಿನಲ್ಲಿ ಕೌಶಲಾಧಾರಿತ, ಜ್ಞಾನಾಧಾರಿತ, ಚಟುವಟಿಕೆಯಾಧಾರಿತ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ ಎಂದರು.
ವಿದ್ಯಾರ್ಥಿ ದೆಸೆಯಲ್ಲಿ ಕಲಿತ ಜ್ಞಾನ, ಬದುಕಿನ ಮಾರ್ಗವಾಗಿ ರೂಪಿಸುವುದರಲ್ಲಿ ಯಾವುದೇ ನಿಸ್ಸಂದೇಹ ಬೇಡ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮನ್ನು ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಮುಂದೆ ಬರಬೇಕು. ಆಗ ಮಾತ್ರ ವಿದ್ಯಾರ್ಥಿಯ ವ್ಯಕ್ತಿತ್ವ ವೃದ್ಧಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ವಿದ್ಯಾರ್ಥಿಗಳ ಗುರಿಯು ಸಹಕಾರಗೊಳಿಸಲು, ವಿದ್ಯಾರ್ಥಿ ದೆಸೆಯಲ್ಲಿಯೇ ಸರ್ವ ರೀತಿಯಲ್ಲೂ ಪ್ರಯತ್ನಿಸಬೇಕು. ಈ ಪ್ರಯತ್ನದ ಫಲವಾಗಿ ಅವರ ಹೆಜ್ಜೆಯ ಗುರುತುಗಳು ಮುಂದಿನ ತಲೆಮಾರಿನ ವಿದ್ಯಾರ್ಥಿಗಳಿಗೆ ಮಾದರಿಯಾಗುತ್ತದೆ. ಇಂತಹ ಮಾದರಿಯ ಕಾರ್ಯಕ್ರಮಗಳ ಸದುಪಯೋಗ ಎಲ್ಲರೂ ಪಡೆದುಕೊಂಡರೆ ಕಾಲೇಜಿಗೆ, ನಿಮ್ಮ ತಂದೆ ತಾಯಿಗಳಿಗೆ, ಸಮಾಜಕ್ಕೆ ಅತ್ಯುತ್ತಮ ಕಾಣಿಕೆಯನ್ನು ನೀಡಬಲ್ಲಿರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ರಾಜಕುಮಾರ್ ಮಾತನಾಡಿ, ಪರ್ವ ಎಂಬ ಪದವೇ ನಮ್ಮಲ್ಲಿ ಒಂದು ಹಬ್ಬದ ಸಂಭ್ರಮವನ್ನು ಸೂಚಿಸುವ ಪದ. ಕಾಲೇಜು ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಬಾಂಧವ್ಯದ ಬೆಸುಗೆಯಾಗಿ ನಿಲ್ಲುತ್ತದೆ. ಮನುಷ್ಯತ್ವದ ನೆಲೆಯು ಮೊದಲ್ಗೊಂಡು ಅದರ ಜೊತೆಗೆ ಶಿಕ್ಷಣ ಪಡೆಯುವಲ್ಲಿ ಸಹಕಾರಿಯಾಗುತ್ತದೆ. ಯುವ ಪರ್ವ ಕಾರ್ಯಕ್ರಮವು ಯುವಕರ ಜ್ಞಾನದ ದೇಗುಲವಾಗಲಿ. ಆ ಮೂಲಕ ನಿಮ್ಮಲ್ಲಿ ಜ್ಞಾನವು ಪ್ರಜ್ವಲಿಸಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ರಾಘವೇಂದ್ರ, ತ್ಯಾಗರಾಜ್, ಸಿದ್ದೇಶ್ವರ್, ಶಿವರಾಜ್, ಜಗದೀಶ್, ಕೃಷ್ಣವೇಣಿ, ಅಯಾಜ್, ಸುರೇಶ್, ಪ್ರಭು ಮತ್ತು ಮುರಳಿ ಕೂಡ್ಲೂರು ಭಾಗವಹಿಸಿದ್ದರು. ರಮೇಶ್ ಕಾರ್ಯಕ್ರಮ ನಿರ್ವಹಿಸಿದರು. ನರೇಂದ್ರ ಸ್ವಾಗತಿಸಿ ಮತ್ತು ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.