ಚನ್ನಪಟ್ಟಣ: ಪಟ್ಟಣದ ಪೊಲೀಸ್ ತರಬೇತಿ ಶಾಲೆ, ರೇಷೆ ಕೃಷಿ ಫಾರಂ ಸುತ್ತ ಕೆಲವು ತಿಂಗಳುಗಳಿಂದ ಸಾರ್ವಜನಿಕರ ನಿದ್ದೆಗೆಡಿಸಿದ್ದ ಚಿರತೆ ಭಾನುವಾರ ರಾತ್ರಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.
ಕೆಲವು ತಿಂಗಳಗಳಿಂದಲೂ ಈ ಭಾಗದಲ್ಲಿ ರಾತ್ರಿ ವೇಳೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಬಗ್ಗೆ ಸಾರ್ವಜನಿಕರು ಭಯಗೊಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಅಧಿಕಾರಿಗಳು ವಂದಾರಗುಪ್ಪೆ ಅರಣ್ಯ ಪ್ರದೇಶದಲ್ಲಿ ಬೋನು ಇಟ್ಟಿದ್ದರು.
4ವರ್ಷದ ಗಂಡು ಚಿರತೆ ಇದಾಗಿದೆ ಎಂದು ವಲಯ ಅರಣ್ಯಾಧಿಕಾರಿ ಮನ್ಸೂರ್ ಅಹಮದ್ ತಿಳಿಸಿದ್ದಾರೆ. ಚಿರತೆ ಸೆರೆ ಹಿಡಿಯಲು ಉಪವಲಯ ಅರಣ್ಯಾಧಿಕಾರಿ ಶ್ರೀಧರ್, ಅರಣ್ಯ ರಕ್ಷಕ ಕೃಷ್ಣಪ್ಪ, ಅರಣ್ಯ ವೀಕ್ಷಕರಾದ ಹನುಮಂತು, ಮಂಚಯ್ಯ ತಂಡ ಕಾರ್ಯಾಚರಣೆ ನಡೆಸಿತ್ತು.