ರಾಮನಗರ: ‘ದೇವೇಗೌಡ ಅವರ ಮುಖ ನೋಡಿಕೊಂಡು ಸುಮ್ಮನಿದ್ದೇನೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಹೇಳಿದ್ದಾರೆ. ಇಲ್ಲಾಂದ್ರೆ ಏನು ಮಾಡುತ್ತಿದ್ದರು? ಅವರ ಮಾತಿನ ಅರ್ಥವೇನು? ನಾನೂ ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೀನಿ. ಅದೇನು ಮಾಡುತ್ತಾರೊ ಮಾಡಲಿ ನೋಡೋಣ’ ಎಂದು ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.
ಸಚಿವ ಚಲುವರಾಯ ಸ್ವಾಮಿ ಅವರು ತಮ್ಮ ವಿರುದ್ಧ ನೀಡಿರುವ ಹೇಳಿಕೆ ಕುರಿತು ತಾಲ್ಲೂಕಿನ ಕೇತಗಾನಹಳ್ಳಿಯಲ್ಲಿ ಶುಕ್ರವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ‘ಅವರನ್ನು ನಾನೂ ನೋಡಿದ್ದೇನೆ. ಹೇಗೆ ಬಂದರು, ಏನು ಮಾಡಿದರು ಎಂಬುದು ಗೊತ್ತಿದೆ. ಇನ್ನೂ ಅದೇನು ಮಾತನಾಡುತ್ತಾರೊ ಮಾತನಾಡಲಿ. ಇನ್ನೂ ಚನ್ನಾಗಿ ಮಾತನಾಡಲಿ’ ಎಂದು ವಂಗ್ಯವಾಡಿದರು.
‘ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ಬೈರೇಗೌಡ ಅವರನ್ನು ಪಕ್ಷದಿಂದ ಹೊರಗೆ ಕಳಿಸಿದ್ದು ಯಾರೆಂದು ಕುಮಾರಸ್ವಾಮಿ ಹೇಳಲಿ ಎಂದು ಕೇಳಿದ್ದಾರೆ. ಹೆಗಡೆ ಅವರೆಲ್ಲರೂ ರಾಜಕಾರಣದಲ್ಲಿದ್ದಾಗ ನಾನಿನ್ನೂ ಚಿಕ್ಕ ಹುಡುಗ. ಅವರ ರಾಜಕಾರಣಕ್ಕೂ ನನಗೂ ಸಂಬಂಧವಿಲ್ಲ. ಮಂಡ್ಯದಲ್ಲಿ ಪಕ್ಷದ ಸೋಲಿನ ಕುರಿತು ಮಾತನಾಡುವ ಇವರು 2008 ಮತ್ತು 2018ರಲ್ಲಿ ಯಾಕೆ ಸೋತರು? ಅಭಿವೃದ್ಧಿ ಮಾಡಲಿಲ್ಲವೆಂದು ಸೋತರೇ?’ ಎಂದು ಪ್ರಶ್ನಿಸಿದರು