ಚನ್ನಪಟ್ಟಣ: ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು. ಕೇವಲ ಕುಟುಂಬ ರಾಜಕಾರಣಕ್ಕೆ ಮಾತ್ರ ಸೀಮಿತವಾಗಿರುವ ಎರಡೂ ಪಕ್ಷಗಳನ್ನು ಜನತೆ ರಾಜಕಾರಣದಿಂದ ದೂರವಿಡಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಮನವಿ ಮಾಡಿದರು.
ನಗರದಲ್ಲಿ ಸೋಮವಾರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕೆಆರ್ಎಸ್ ಅಭ್ಯರ್ಥಿ ಮಹಮದ್ ಮುಸಾದಿಕ್ ಪಾಷಾ ಅವರ ಪರವಾಗಿ ಪ್ರಚಾರ ನಡೆಸಿ ಮಾತನಾಡಿ, ಸ್ವಚ್ಛ, ಪ್ರಾಮಾಣಿಕ, ಪಾರದರ್ಶಕ ಆಡಳಿತಕ್ಕಾಗಿ ಕೆಆರ್ಎಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಕುಕ್ಕರ್, ನಿಕ್ಕರ್, ಲಿಕ್ಕರ್ಗಳಿಗೆ ಮತ ಹಾಕುವುದನ್ನು ನಿಲ್ಲಿಸಬೇಕು. ಸಂಸದ ಡಿ.ಕೆ. ಸುರೇಶ್ 11 ವರ್ಷಗಳ ಹಿಂದೆ ಪ್ರಥಮ ಬಾರಿಗೆ ಸಂಸದರಾದಾಗ ಅವರ ಆಸ್ತಿ ಹತ್ತಾರು ಕೋಟಿ ಇತ್ತು. ಈಗ ಅವರು ಘೋಷಿಸಿರುವ ಆಸ್ತಿಯೇ ₹ 500 ರಿಂದ ₹ 600 ಕೋಟಿ ಆಗಿದೆ. ತಿಂಗಳಿಗೆ ಮೂರರಿಂದ ನಾಲ್ಕು ಲಕ್ಷ ಸಂಬಳ ಪಡೆಯುವ ಸಂಸದವರಿಗೆ ನೂರಾರು ಕೋಟಿ ಆಸ್ತಿ ಎಲ್ಲಿಂದ ಬಂತು ಎಂದು ಮತದಾರರು ಯೋಚಿಸಬೇಕು ಎಂದರು.
ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಸರ್ಕಾರಿ ವೈದ್ಯರಾಗಿದ್ದವರು. ಇವರು ₹ 100 ಕೋಟಿಗಳ ಒಡೆಯ. ಇಷ್ಟು ಆಸ್ತಿಯನ್ನು ಸಂಪಾದನೆ ಮಾಡಲು ಹೇಗೆ ಸಾಧ್ಯ ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.
ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್. ಜೀವನ್, ಜಿಲ್ಲಾಧ್ಯಕ್ಷ ಸುಧಾಕರ್, ಇತರ ಪದಾಧಿಕಾರಿಗಳು ಹಾಜರಿದ್ದರು.