ಕನಕಪುರ: ‘ನನಗೆ ಅಧಿಕಾರ ಕೊಡಿ ಎಂದು ಅರ್ಜಿ ಹಾಕಿಕೊಂಡು ಬಂದವನಲ್ಲ. ಆಕಸ್ಮಿಕವಾಗಿ ಸಂಸತ್ಗೆ ನೀವೇ ಗೆಲ್ಲಿಸಿ ಕಳುಸಿದ್ದೀರಿ. ಸಿಕ್ಕ ಅವಕಾಶವನ್ನು ಉತ್ತಮ ಕೆಲಸ ಮಾಡಿರುವ ತೃಪ್ತಿ ಇದೆ. ನನ್ನ ಕೆಲಸಕ್ಕೆ ಕೂಲಿ ಕೇಳಿದ್ದೆ. ಮತದಾರರು ಬೇಡ ನೀವು ವಿಶ್ರಾಂತಿ ಮಾಡಿ ಎಂದಿದ್ದಾರೆ. ಅದರಂತೆ ಇರುತ್ತೇನೆ‘ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಇಲ್ಲಿನ ಮೈಸೂರು ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪರವಾಗಿ ದುಡಿದ ಕಾರ್ಯಕರ್ತರು, ಮುಖಂಡರು ಸಭೆಯಲ್ಲಿ ಭಾವುಕರಾಗಿ ಮಾತನಾಡಿದರು.
’ನನ್ನ ಕುಟುಂಬವನ್ನು ನೋಡಿಕೊಂಡವನಲ್ಲ. ನನಗೆ ನೀವೇ ಎಲ್ಲ ಎಂದು ಹಗಲು ರಾತ್ರಿ ಕೆಲಸ ಮಾಡಿದೆ. ನಿಸ್ವಾರ್ಥದಿಂದ ದುಡಿದಿದ್ದೇನೆ. ನಾನು ಸತ್ತರೂ ಸಂಸತ್ನಲ್ಲಿ ನನ್ನ ಹೆಸರು ಶಾಶ್ವತವಾಗಿ ಇರುತ್ತದೆ. ಅಂತಹ ಅವಕಾಶ ಕೊಟ್ಟಿದ್ದೀರಿ. ಇದಕ್ಕಿಂತಲೂ ಬೇರೆ ಭಾಗ್ಯ ನನಗೆ ಬೇಕಿಲ್ಲ’ ಎಂದರು.
‘ನನ್ನ ಸೋಲಿನಿಂದ ಕೆಲವರು ದುಃಖಿತರಾಗಿದ್ದಾರೆ. ಕೆಲವರಿಗೆ ನನ್ನ ಸೋಲು ಖುಷಿ ತಂದಿದೆ. ಇಲ್ಲಿ ಕಾಂಗ್ರೆಸ್ ಶಕ್ತಿಯನ್ನು ಯಾರಿಂದಲೂ ಕುಂದಿಸಲು ಆಗುವುದಿಲ್ಲ’ ಎಂದು ವಿರೋಧಿಗಳಿಗೆ ಚಾಟಿ ಬೀಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಮಾನವೇ ಅಂತಿಮ. ಸೋಲು ಒಪ್ಪಿಕೊಳ್ಳಬೇಕಿದೆ ಎಂದರು.
ರೂರಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಎಚ್.ಕೆ.ಶ್ರೀಕಂಠ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯ್ ದೇವ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಸಪ್ಪ, ಯೋಜನಾ ಪ್ರಾಧಿಕರದ ಅಧ್ಯಕ್ಷ ಕೃಷ್ಣಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ದಿಲೀಪ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪುರುಷೋತ್ತಮ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಮುನಿ ಹುಚ್ಚೇಗೌಡ ಸೇರಿದಂತೆ ಅನೇಕರು ಮುಖಂಡರು ಇದ್ದರು.