ಕನಕಪುರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಫಲಿತಾಂಶವು ಜನರ ನಿರೀಕ್ಷೆಗೂ ಮೀರಿ ಬಂದಿದೆ. ಇದಕ್ಕೆ ಕ್ಷೇತ್ರದ ಮತದಾರರೇ ಕಾರಣ ಎಂದು ರಾಮನಗರ ಜಿಲ್ಲಾ ಉಪಾಧ್ಯಕ್ಷ ರಾಜೇಶ್ ತಿಳಿಸಿದರು.
ನಗರದ ಕೋಟೆ ಬಸವ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಡಾ.ಸಿ.ಎನ್.ಮಂಜುನಾಥ್ ಅವರ ಗೆಲುವಿಗೆ ಶ್ರಮಿಸಿದ ಹಾಗೂ ಮತ ನೀಡಿದ ಎಲ್ಲರಿಗೂ ಅಭಿನಂದನೆ ತಿಳಿಸಿದರು.
ಸಂಸದರು ತಮ್ಮ ನಡವಳಿಕೆ ಹಾಗೂ ಅವರ ಹಿಂಬಾಲಕರಿಂದ ಇಂದು ಅವರು ಸೋತಿದ್ದಾರೆ. ಅವರ ದರ್ಪ ಮತ್ತು ಅಹಂಕಾರದಿಂದ ಬೇಸತ್ತ ಜನರು ಡಾಕ್ಟರ್ಗೆ ಮತ ನೀಡಿದ್ದಾರೆ ಎಂದರು.
ನಗರ ಮಂಡಲ ಅಧ್ಯಕ್ಷ ಕೋಟೆ ಮಂಜುನಾಥ್ ಮಾತನಾಡಿ, ಡಾ.ಮಂಜುನಾಥ್ ಅವರು ಅತ್ಯಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿ, ದಾಖಲೆ ನಿರ್ಮಿಸಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವರಲಕ್ಷ್ಮಿ, ಕಾರ್ಯದರ್ಶಿ ಶ್ರೀವಲ್ಲಿ, ಕೋಟೆ ಕಿಟ್ಟಿ, ದಯಾನಂದ್, ಡಿ.ಶ್ರೀನಿವಾಸ್, ಕೃಷ್ಣಪ್ಪ, ಪವಿತ್ರಾ, ರೂಪಶ್ರೀ, ರವಿಕುಮಾರ್, ಹರೀಶ್, ಸಾಂಬಶಿವನ್, ಗೋಪಾಲ, ಸ್ವಾಮಿಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.