ರಾಮನಗರ: ನರೇಗಾದಡಿ ಕೊಟ್ಟಿಗೆ ನಿರ್ಮಾಣದ ಬಿಲ್ ಬಿಡುಗಡೆ ವಿಳಂಬವಾಗಿದ್ದರಿಂದ ಆಕ್ರೋಶಗೊಂಡ ರೈತರೊಬ್ಬರು, ಮೈಲನಾಯಕನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣಕ್ಕೆ ಶುಕ್ರವಾರ ಮೇಕೆಗಳನ್ನು ನುಗ್ಗಿಸಿ ಪ್ರತಿಭಟನೆ ನಡೆಸಿದರು.
ಪಂಚಾಯಿತಿ ಕಡೆಯಿಂದ ರೈತ ರವಿ ಅವರಿಗೆ ಕೊಟ್ಟಿಗೆ ಮಂಜೂರಾಗಿತ್ತು. ನಿರ್ಮಾಣ ಕೆಲಸದ ₹37,982 ಸಾವಿರ ಬಿಲ್ ಒಂದು ವರ್ಷವಾದರೂ ಬಿಡುಗಡೆಯಾಗಿರಲಿಲ್ಲ.
ನಿತ್ಯ ಕಚೇರಿಗೆ ಅಲೆದು ರೋಸಿ ಹೋಗಿದ್ದ ರವಿ ಅವರು, ಬೆಳಿಗ್ಗೆ ಮೇಕೆಗಳನ್ನು ತಂದು ಕಚೇರಿ ಆವರಣದೊಳಗೆ ಬಿಟ್ಟು ಹೊರಗಿನಿಂದ ಕೆಲ ಹೊತ್ತು ಬಾಗಿಲು ಹಾಕಿಕೊಂಡರು. ಪ್ರತಿಭಟನೆ ನಿಲ್ಲಿಸುವಂತೆ ಪಿಡಿಒ ಮಾಡಿದ ಮನವಿಗೂ ಬಗ್ಗಲಿಲ್ಲ. ಕಡೆಗೆ, ತಾಲ್ಲೂಕು ಪಂಚಾಯಿತಿ ಇಒ ಕರೆ ಮಾಡಿ ಮಾತನಾಡಿದ ಬಳಿಕ, ಪ್ರತಿಭಟನೆ ಕೈಬಿಟ್ಟರು.
‘ಬಿಲ್ ಬಿಡುಗಡೆಗಾಗಿ ಅಧಿಕಾರಿಗಳು ಸಬೂಬು ಹೇಳುತ್ತಲೇ ಬರುತ್ತಿದ್ದಾರೆ. ಇದರಿಂದಾಗಿ, ಬೇಸತ್ತು ಪಂಚಾಯಿತಿ ಕಚೇರಿಗೆ ಮೇಕೆಗಳನ್ನು ನುಗ್ಗಿಸಿ ಪ್ರತಿಭಟನೆ ನಡೆಸಿದ್ದೇನೆ. ಇನ್ನಾದರೂ, ಕೊಟ್ಟಿಗೆ ನಿರ್ಮಾಣದ ಬಿಲ್ ಬಿಡುಗಡೆ ಮಾಡಲಿ’ ಎಂದು ರವಿ ಆಗ್ರಹಿಸಿದರು.