ಚನ್ನಪಟ್ಟಣ: ‘ಬೆಂಗಳೂರು ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲು ಉತ್ಪಾದನೆಯಲ್ಲಿ ಚನ್ನಪಟ್ಟಣ ತಾಲ್ಲೂಕು ಮೊದಲ ಸ್ಥಾನದಲ್ಲಿದೆ’ ಎಂದು ಬಮೂಲ್ ನಿರ್ದೇಶಕ ಎಚ್.ಸಿ.ಜಯಮುತ್ತು ತಿಳಿಸಿದರು.
ತಾಲ್ಲೂಕಿನ ಬಾಣಗಹಳ್ಳಿ ಗ್ರಾಮದಲ್ಲಿ ಶನಿವಾರ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಳೆಯ ಅಭಾವ ಹಾಗೂ ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಲೆ ಇಲ್ಲದೆ ರೈತರು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ರೈತರಿಗೆ ನೆರವಾಗಿದ್ದು ಹೈನುಗಾರಿಕೆ. ತಾಲ್ಲೂಕಿನಲ್ಲಿ ಸಾಕಷ್ಟು ಕುಟುಂಬಗಳು ಹೈನುಗಾರಿಕೆಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಹೈನುಗಾರಿಕೆಯಲ್ಲಿ ಆಧುನಿಕತೆ ಅಳವಡಿಸಿಕೊಂಡು ಗುಣಮಟ್ಟದ ಹಾಲು ಉತ್ಪಾದನೆ ಮಾಡಿದರೆ ಪ್ರಗತಿ ಸಾಧಿಸಬಹುದು’ ಎಂದರು.
ಚನ್ನಪಟ್ಟಣ ಶಿಬಿರದ ಉಪ ವ್ಯವಸ್ಥಾಪಕ ಡಾ.ಸಿ.ಎನ್.ಕೆಂಪರಾಜು ಸಂಘದ ಅಭಿವೃದ್ಧಿಗೆ ಪೂರಕವಾದ ಸಲಹೆ ನೀಡಿದರು. ಸಂಘದ ಸಿಇಒ ಬಿ.ವಿ.ಅಶೋಕ್ ಸಂಘದ 2019-20ನೇ ಸಾಲಿನ ಖರ್ಚು ವೆಚ್ಚದ ಬಗ್ಗೆ ವಿವರಿಸಿದರು.
ಸಂಘದ ಅಧ್ಯಕ್ಷ ಗುರುವಯ್ಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬೀಸಯ್ಯ, ಮುಖಂಡರಾದ ಕೆಂಚೇಗೌಡ, ನಿರ್ದೇಶಕರಾದ ಬಿ.ಎಂ.ಶ್ರೀನಿವಾಸ್, ಕೆ.ಎಸ್. ಶಿವಲಿಂಗಯ್ಯ, ಗೋವಿಂದಯ್ಯ, ಪ್ರಕಾಶ್, ಬಿ.ಎಂ.ಸಿದ್ದಪ್ಪ, ಪುಟ್ಟಸ್ವಾಮಿ, ರಶ್ಮಿ, ಗುರುಲಕ್ಷ್ಮಮ್ಮ, ಸೌಭಾಗ್ಯಮ್ಮ ಹಾಜರಿದ್ದರು.