ಹಾರೋಹಳ್ಳಿ: ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪುಟ್ಟಣ್ಣ ಅಧಿಕಾರ ದಾಹಕ್ಕಾಗಿ ಪವಿತ್ರವಾದ ಶಿಕ್ಷಕರ ಕ್ಷೇತ್ರವನ್ನು ಅಪವಿತ್ರಗೊಳಿಸಿದ್ದಾರೆ ಎಂದು ರೇಷ್ಮೆ ಕೈಗಾರಿಕಾ ಉದ್ಯಮ ನಿಗಮದ ಮಾಜಿ ಅಧ್ಯಕ್ಷ ಗೌತಮ್ ಗೌಡ ದೂರಿದರು.
ಶನಿವಾರ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಶಿಕ್ಷಕರ ಹಿತಕ್ಕಾಗಿ ನಡೆಯುತ್ತಿಲ್ಲ. ಬದಲಾಗಿ ಪುಟ್ಟಣ್ಣ ಅವರ ಹಿತಕ್ಕಾಗಿ ನಡೆಯುತ್ತಿದೆ. ಅಧಿಕಾರದ ಲಾಲಸೆಗೆ ಒಳಗಾಗಿರುವ ಅವರು ಕಾಲಕ್ಕೆ ತಕ್ಕಂತೆ ಪಕ್ಷ ಬಿಟ್ಟು ಇನ್ನೊಂದು ಪಕ್ಷ ಸೇರುತ್ತಿದ್ದಾರೆ ಎಂದರು.
ತಾ.ಪಂ ಮಾಜಿ ಸದಸ್ಯ ಕೊಳ್ಳಿಗಾನಹಳ್ಳಿ ರಾಮು ಮಾತನಾಡಿ, ಸಮಯಕ್ಕೆ ತಕ್ಕಂತೆ ಪಕ್ಷ ಬದಲಿಸುವ ಮೂಲಕ ಶಿಕ್ಷಕರಿಗೆ ಮೋಸ ಮಾಡುತ್ತಿದ್ದಾರೆ ಎಂದರು.
ಮುಖಂಡ ಮಹದೇವ್, ರಾಮನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುರಳೀಧರ್, ನಾಗರಾಜು, ಪಡುವಣಗೆರೆ ಸಿದ್ದರಾಜು, ಚಂದ್ರು, ವಕೀಲ ಚಂದ್ರಶೇಖರ್, ಶೇಷಾದ್ರಿ ರಾಮು, ಪಿಚ್ಚನಕೆರೆ ಜಗದೀಶ್, ಬಾಲಾಜಿ ಸಿಂಗ್, ವಾಲೆ ವೆಂಕಟೇಶ್, ಪ್ರದೀಪ್, ಕಾರ್ತಿಕ್ ಇತರರು ಹಾಜರಿದ್ದರು.