ರಾಮನಗರ: ತಾಲ್ಲೂಕಿನ ವಡ್ಡರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ವಿ.ಎಚ್. ನಾಗರಾಜು ಗುರುವಾರ ಅವಿರೋಧವಾಗಿ ಆಯ್ಕೆಯಾದರು.
ಟಿ. ವೆಂಕಟೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಂಘದ ಆವರಣದಲ್ಲಿ ಚುನಾವಣೆ ನಡೆಯಿತು. ನಾಗರಾಜು ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾದರು. ಅವರನ್ನು ಆಡಳಿತ ಮಂಡಳಿ ನಿರ್ದೇಶಕರು, ಗ್ರಾಮಸ್ಥರು, ಮುಖಂಡರು ಅಭಿನಂದಿಸಿದರು. ಚುನಾವಣಾಧಿಕಾರಿಯಾಗಿ ಕೆ.ವಿ. ಉಮೇಶ್ ಕಾರ್ಯ ನಿರ್ವಹಿಸಿದರು.
ಅಧ್ಯಕ್ಷ ನಾಗರಾಜು ಮಾತನಾಡಿ, ‘ಸ್ಥಳೀಯ ರೈತರ ಜೀವನ ಮಟ್ಟ ಮತ್ತು ಅವರ ಆರ್ಥಿಕ ಸುಧಾರಣೆಗೆ ಹೈನುಗಾರಿಕೆ ಸಂಜೀವಿನಿಯಾಗಿದೆ. ರೈತರು ಉತ್ತಮ ತಳಿಯ ಹಸುಗಳನ್ನು ಸಾಕುವುದರ ಜೊತೆಗೆ ಹೈನುಗಾರಿಕೆಯಲ್ಲಿ ಆಧುನಿಕ ತಾಂತ್ರಿಕತೆ ಅಳವಡಿಸಿಕೊಂಡು ಹೆಚ್ಚಿನ ಲಾಭ ಪಡೆಯಬಹುದು’ ಎಂದು ಸಲಹೆ ನೀಡಿದರು.
ಸಂಘದ ಉಪಾಧ್ಯಕ್ಷೆ ಚನ್ನಮ್ಮ ಮಾತನಾಡಿ, ‘ಸಂಘದಲ್ಲಿ ಪ್ರತಿದಿನ 2,200 ರಿಂದ 2,300 ಲೀಟರ್ ಹಾಲು ಸಂಗ್ರಹ ಆಗುತ್ತಿದೆ. 5 ಸಾವಿರ ಲೀಟರ್ ಸಾಮರ್ಥ್ಯದ ಬಿಎಂಸಿ ಕೇಂದ್ರಹೊಂದಿದೆ. ಉತ್ಪಾದಕರಿಗೆ ಕಾಲಕಾಲಕ್ಕೇ ಹಣ ಬಟಾವಡೆ ಮಾಡಲಾಗುತ್ತಿದ್ದು ಜನಸ್ನೇಹಿಯಾಗಿ ಸಂಘ ಮುನ್ನಡೆಯುತ್ತಿದೆ’ ಎಂದುತಿಳಿಸಿದರು.
ಸಂಘದ ಮುಖ್ಯ ಕಾರ್ಯ ನಿರ್ವಾಹಕ ಎನ್. ಪ್ರದೀಪ್, ಸದಸ್ಯರಾದ ಟಿ. ವೆಂಕಟೇಶ್, ಎನ್. ಈಶ್ವರ, ಪಿ. ಜಗದೀಶ್, ಕಪನಯ್ಯ, ಶಾಂತಮ್ಮ, ವೆಂಕಟವರದಯ್ಯ, ನಾಗಮಾದಯ್ಯ, ನಾರಾಯಣ, ತಾಯಿಮುದ್ದಮ್ಮ, ಮಹದೇವಮ್ಮ, ತಿಮ್ಮಯ್ಯ ಹಾಲು ಪರೀಕ್ಷಕ ಸಿದ್ದರಾಮಯ್ಯ, ಶುಚಿಗಾರ ಜೆ. ನಾಗರಾಜು ಇದ್ದರು.