ಚನ್ನಪಟ್ಟಣ: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಜೋಡೆತ್ತು ಅಲ್ಲ, ಕುಂಟೆತ್ತುಗಳು. ಅವರಿಬ್ಬರೂ ಕಳ್ಳ ಮತ್ತು ಮಳ್ಳ’ ಎಂದು ಕಂದಾಯ ಸಚಿವ ಆರ್.ಅಶೋಕ ಟೀಕಿಸಿದರು.
‘ರಾಜ್ಯದಲ್ಲಿ ಕಿಚಡಿ ಸರ್ಕಾರ ಅಧಿಕಾರಕ್ಕೆ ಬರಬಾರದು. ಸುಭದ್ರ ಸರ್ಕಾರ ರಚನೆಯಾಗಬೇಕು. ಕೇವಲ ಹತ್ತು, ಹದಿನೈದು ಸ್ಥಾನ ಗೆದ್ದು ಲಾಟರಿ ಎತ್ತುವವರಿಗೆ ಮತ ಹಾಕಬೇಡಿ ಎಂದು ಅವರು ಮನವಿ ಮಾಡಿದರು.
ಶನಿವಾರ ತಾಲ್ಲೂಕು ಪ್ರವೇಶಿಸಿದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಗೆ ಮತ ಹಾಕಿದರೆ ಅದು ಜೆಡಿಎಸ್ಗೆ ಮತ ಹಾಕಿದ ಹಾಗೆ. ರಾಜ್ಯದಲ್ಲೂ ಕೇಂದ್ರದ ರೀತಿ ಸ್ಥಿರ ಸರ್ಕಾರ ಬೇಕು ಎಂದ ಅವರು ಆರು ತಿಂಗಳಿಗೊಂದು ಸರ್ಕಾರ ಬೇಡ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಮಾತನಾಡಿ, ಪ್ರತಿದಿನ ಕೈಗೆ ಸಿಗುವ ಅಭ್ಯರ್ಥಿಯನ್ನು ಗೆಲ್ಲಿಸಿ. ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ ಭೇಟಿ ನೀಡುವ ನಾಯಕರನ್ನು ಆಯ್ಕೆ ಮಾಡಬೇಡಿ ಎಂದರು.
ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ವಿಧಾನ ಪರಿಷತ್ ಸದಸ್ಯರಾದ ಸಿ.ಪಿ. ಯೋಗೇಶ್ವರ್, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು, ತಾಲ್ಲೂಕು ಘಟಕದ ಅಧ್ಯಕ್ಷ ಜಯರಾಮ್ ಭಾಗವಹಿಸಿದ್ದರು.
ತಾಲ್ಲೂಕಿನ ದೊಡ್ಡಮಳೂರು ಅಪ್ರಮೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಯಾತ್ರೆ ಮುಂದುವರೆಯಿತು
ನಂತರ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬೈಕ್ ರ್ಯಾಲಿ ನಡೆಸಿದರು. ನೂರಾರು ಮಂದಿ ಕಾರ್ಯರ್ತರು ಭಾಗವಹಿಸಿದ್ದರು.