ಮಾಗಡಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು ವತಿಯಿಂದ ಆಯೋಜಿಸಿದ್ದ ಎನ್ಎಸ್ಎಸ್ ವಿಶೇಷ ವಾರ್ಷಿಕ ಶಿಬಿರ ನಡೆಯಿತು.
ಈ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ಗಿರಿರಾಜ.ಜಿ.ವೈ. ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಸಮಾಜ ಸೇವೆಯ ಅನುಭವ ಕಲಿಸುತ್ತದೆ. ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ, ಸೇವಾ ಭಾವನೆಯನ್ನು ಬೆಳೆಸಲು ಎನ್ಎಸ್ಎಸ್ ಶಿಬಿರಗಳು ಸಹಕಾರಿಯಾಗಿವೆ ಎಂದರು.
ತಾಲ್ಲೂಕಿನಲ್ಲಿ ಬಾಲ್ಯವಿವಾಹಗಳು ಅಧಿಕವಾಗಿವೆ. ಅಪ್ರಾಪ್ತರು ಮದ್ಯವ್ಯಸನಿಗಳಾಗುತ್ತಿದ್ದಾರೆ. ಆನ್ಲೈನ್ ಜೂಜಾಟ ಹೆಚ್ಚಾಗಿದೆ. ಹಾಗಾಗಿ ಶಿಬಿರಾರ್ಥಿಗಳು ಸೇವೆಯ ಜತೆಗೆ ಗ್ರಾಮೀಣ ಜನತೆಯಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಶಿಬಿರಾಧಿಕಾರಿ ಡಾ.ನಂಜುಂಡ.ಪಿ.ಮಾತನಾಡಿ, ಮಾಗಡಿಯಲ್ಲಿ ಚಾರಿತ್ರಿಕ, ಸಾಹಿತ್ಯ, ಜನಪದ ಮತ್ತು ಬುಡಕಟ್ಟು ಶೋಷಿತ ಸಮುದಾಯಗಳ ಸ್ಥಿತಿಗತಿ ಅಧ್ಯಯನ ಮಾಡುವ ಜತೆಗೆ ಕೆಂಪೇಗೌಡ ಆಳ್ವಿಕೆಯ ಮಹತ್ವ ತಿಳಿಯಲು ಶಿಬಿರ ಆಯೋಜಿಸಲಾಗಿದೆ ಎಂದರು.
ಶಿಬಿರಾಧಿಕಾರಿ ಡಾ.ಚಲುವರಾಜು ಮಾತನಾಡಿ, ಬೆಟ್ಟಗುಡ್ಡಗಳು, ಕಣಿವೆ ಕಂದರ, ಗುಡಿಗೋಪುರ, ಕೆರೆಕಟ್ಟೆಗಳಿಂದ ಕೂಡಿದ ಅರೆಮಲೆನಾಡು ಮಾಗಡಿಯ ಪರಿಸರ ರಕ್ಷಣೆಯ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಲಾಗುವುದು ಎಂದರು.
ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಣ್ಣ.ಡಿ., ಅರ್ಚಕ ವೆಂಕಟೇಶ್ ಐಯ್ಯಂಗಾರ್, ಉಪನ್ಯಾಸಕಿ ಮಾಡಬಾಳ್ ಅನಿತಾ, ಹಳೆಯ ವಿದ್ಯಾರ್ಥಿ ಹೂಜುಗಲ್ ತನುಜ್ ಕುಮಾರ್ ಎನ್.ಎಸ್.ಎಸ್.ಶಿಬಿರದ ಬಗ್ಗೆ ಮಾತಾನಾಡಿದರು. ಶಿಬಿರಾರ್ಥಿಗಳು ಹಾಜರಿದ್ದರು.