ಹಾರೋಹಳ್ಳಿ: ತಾಲ್ಲೂಕಿನ ಚೀಲೂರು ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾಜಿ ಅಧ್ಯಕ್ಷರಾದ ರವಿಕುಮಾರ್ ಮತ್ತು ಶೋಭಾ ರವಿಗೌಡ ಅವರ ನಡುವೆ ಕಾರ್ಖಾನೆ ತೆರಿಗೆ ವಿಚಾರ ಸಂಬಂಧ ಪರಸ್ಪರ ವಾಗ್ವಾದ ನಡೆಯಿತು.
ತಮ್ಮ ತಮ್ಮ ಅವಧಿಯಲ್ಲಿ ಕಾರ್ಖಾನೆಯ ತೆರಿಗೆ ಎಷ್ಟು ಸಂಗ್ರಹವಾಗಿದೆ ಎಂದು ಪರಸ್ಪರ ಪ್ರಶ್ನಿಸಿದರು. ಇಬ್ಬರ ವಾಗ್ವಾದವನ್ನು ವೀಕ್ಷಿಸಿದ ಗ್ರಾಮ ಪಂಚಾಯಿತಿ ಸದಸ್ಯರು ಮೂಕ ಪ್ರೇಕ್ಷಕರಾಗಿದ್ದರು.
ಪಿಡಿಒ ಅವರು ಏಕಮುಖವಾಗಿ ವರ್ತಿಸುತ್ತಾ ವರ್–1ರ ಕ್ರಿಯಾ ಯೋಜನೆಯನ್ನು ಕಾಂಗ್ರೆಸ್ ಬೆಂಬಲಿತ 10 ಅಭ್ಯರ್ಥಿಗಳ ಗಮನಕ್ಕೆ ತಾರದೇ ಕ್ರಿಯಾ ಯೋಜನೆ ರೂಪಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅರ್ಧ ಘಂಟೆಗಳ ಕಾಲ ಧರಣಿ ನಡೆಸಿದರು. ಪಿಡಿಒ ಅವರು ಕಾಂಗ್ರೆಸ್ ಬೆಂಬಲಿತ ಸದಸ್ಯರ ಮನವೊಲಿಸಿ ಇನ್ನೊಮ್ಮೆ ಹೀಗೆ ಆಗುವುದಿಲ್ಲ ಎಂದು ಹೇಳಿ ಸಭೆಗೆ ಬರುವಂತೆ ಮನವೊಲಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ರವಿ ಗೌಡ ಮಾತನಾಡಿ. ಸರ್ವ ಸದಸ್ಯರ ಗಮನಕ್ಕೆ ತರದೆ ಪಿಡಿಒ ಅವರು, ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ನಾನು ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿದ್ದಾಗ ಸಭೆಯಲ್ಲಿ ಚರ್ಚೆ ಮಾಡಿದರೂ ಸಹ ಸಭೆಯಲ್ಲಿ ಯಾವುದೇ ಚರ್ಚೆ ಮಾಡಿಲ್ಲ ಅದನ್ನು ಅನುಮೋದನೆ ಮಾಡಬೇಡಿ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ದೂರು ಹೇಳಿದ್ದೀರು. ಈಗ ಸದಸ್ಯರ ಗಮನಕ್ಕೆ ತರದೆ ಕೆಲಸ ಮಾಡಿದ್ದಾರೆ. ನನ್ನ ಅವಧಿಯಲ್ಲಿ ಎಲ್ಲದಕ್ಕೂ ಪ್ರಶ್ನೆ ಮಾಡುತ್ತಿದ್ದ ಸದಸ್ಯರು ಈಗ ಯಾಕೆ ಮಾತನಾಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಮಾಜಿ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಈಗಿರುವ ಅಧ್ಯಕ್ಷರು ಕಳ್ಳತನಕ್ಕೆ ಕೈ ಹಾಕುವವರಲ್ಲ. ಪೈಪ್ ಲೈನ್ ಕಾಮಗಾರಿ ಕ್ಷನ್ ಪ್ಲಾನ್ ನಲ್ಲಿ ಸೇರ್ಪಡೆ ಮಾಡಿರುವುದು ನನಗೂ ಮಾಹಿತಿ ಇಲ್ಲ. ಕ್ರಿಯಾಯೋಜನೆಯಲ್ಲಿ ನಮಗೆ ಹೆಚ್ಚಿನ ಆದ್ಯತೆ ಕೊಟ್ಟಿರಬಹುದು. ಮುಂದೆ ನಿಮಗೂ ಹೆಚ್ಚಿನ ಆದ್ಯತೆ ಕೊಡುತ್ತಾರೆ. ಸ್ವಲ್ಪ ತಾಳ್ಮೆಯಿಂದ ಇರಿ ಎಂದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ್ಯೆ ಸುಧಾ ನಾಗೇಶ್ ಉಪಾಧ್ಯಕ್ಷ ವಿನೋದ ತಿಮ್ಮಪ್ಪ, ಸದಸ್ಯರಾದ ರವಿಕುಮಾರ್, ಹೊನ್ನಗಿರಿ ಗೌಡ, ಸಂತೋಷ್, ಪ್ರೇಮಾ, ಕೃಷ್ಣಮೂರ್ತಿ, ಲಕ್ಷ್ಮಣ್, ಗೀತಾ, ಅನುಸೂಯಮ್ಮ, ಜಯಮ್ಮ, ರತ್ನಮ್ಮ, ಮಮ್ತಾಜ್ ಬೇಗಂ, ವಸಂತ, ಮೇಘನಾ, ಕೃಷ್ಣಪ್ಪ, ಮುತ್ತುರಾಜ್, ಚಂದನ್, ಪಿಡಿಒ ಮಹದೇವ್, ಎಸ್ಡಿಎ ಕುಮಾರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.