ರಾಮನಗರ: ಇಲ್ಲಿನ ಅಂಜನಾಪುರ ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯಿಂದ ಶನಿವಾರ ‘ಶನಿ ಪ್ರಭಾವ’ ನಾಟಕ ಪ್ರದರ್ಶನ ನಡೆಯಿತು.
ರಂಗಭೂಮಿ ಕಲೆ ಉಳಿಸುವಲ್ಲಿ ಗ್ರಾಮೀಣ ಭಾಗದ ಜನರ ಪಾತ್ರ ಪ್ರಮುಖವಾಗಿದೆ. ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದ ರಂಗ ಕಲೆ ಉತ್ತಮ ಮಾಹಿತಿ ಒಳಗೊಂಡಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಶಂಕರಪ್ಪ ತಿಳಿಸಿದರು.
ಕರ್ನಾಟಕ ವೀರಶೈವ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ‘ಯಾವುದೇ ನಾಟಕಗಳಲ್ಲಿ ಮೊದಲು ಅನ್ಯಾಯ, ದುರಹಂಕಾರ, ದರ್ಪ, ದೌರ್ಜನ್ಯ ವಿಜೃಂಭಿಸಿದರೂ ಕೊನೆಯಲ್ಲಿ ಸತ್ಯ, ಧರ್ಮ, ಜಯಕ್ಕೆ ನ್ಯಾಯ ಸಿಗುವುದನ್ನು ನಾವು ಕಾಣುತ್ತೇವೆ. ಜೀವನದ ನೀತಿ ಪಾಠ ನಾಟಕಗಳಿಂದ ಕಲಿಯಬಹುದಾಗಿದೆ’ ಎಂದು ತಿಳಿಸಿದರು.
ವಿಶ್ವ ವೀರಶೈವ ಒಕ್ಕೂಟ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಸ್.ಶಿವಕುಮಾರಸ್ವಾಮಿ, ತಾಲ್ಲೂಕು ಘಟಕದ ಕಾರ್ಯದರ್ಶಿ ರಾಜಶೇಖರ್, ತಮಿಳುನಾಡು ಗೇರುಮಾಳ ಹೊಸಮಠದ ಶಿವಪಂಚಾಕ್ಷರಿ ಸ್ವಾಮೀಜಿ ಮಾತನಾಡಿದರು.
ವಿಭೂತಿಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಂದರಮ್ಮರಾಜಣ್ಣ, ವಿಎಸ್ ಎಸ್ಎನ್ ಉಪಾಧ್ಯಕ್ಷ ಪಿ.ನಾಗರಾಜು, ಮುಖಂಡರಾದ ರೇವಣ್ಣ, ನಾಗಮಹದೇವಪ್ಪ, ರೇವಣ್ಣ, ಶಿವಕುಮಾರಸ್ವಾಮಿ, ಕುನ್ನಿನಾಯ್ಕ, ದೊಡ್ಡವೀರಯ್ಯ, ಆಟೋಚಂದ್ರು, ಮೈಕ್ ನಾಗರಾಜು, ರೇಣುಕಯ್ಯ, ಮಲ್ಲೇಶ್, ಡ್ರಾಮಾ ಮಾಸ್ಟರ್ ನಾರಾಯಣ್ ಇದ್ದರು.