ಮಾಗಡಿ: ಪಟ್ಟಣದಲ್ಲಿ ನಡೆಯುತ್ತಿರುವ ಗ್ರಾಮೀಣ ನಾಟಕೋತ್ಸವ ಸ್ಪರ್ಧೆಯಲ್ಲಿ ಗುರುವಾರ ತಿಪ್ಪಸಂದ್ರ ಹೋಬಳಿ ಗಂಗೋನಹಳ್ಳಿಯ ನಾದರಂಜನಿ ಕಲಾ ಸಂಘದ ಕಲಾವಿದರು ಅಭಿನಯಿಸಿದ ‘ಸಂಗೀತ ಸುಭದ್ರಾ’ ಪೌರಾಣಿಕ ನಾಟಕ ಕಲಾಭಿಮಾನಿಗಳ ಮನಸೂರೆಗೊಂಡಿತು.
ವಿದ್ವಾನ್ ಜಿ.ಆರ್.ರಾಮಕೃಷ್ಣನ್ ನಾಟಕಕ್ಕೆ ಚಾಲನೆ ನೀಡಿದರು. ಕನ್ನಡ ರಂಗಭೂಮಿ ರಾಜಾಶ್ರಯ ಮತ್ತು ಜನಪದರ ಆಶ್ರಯದಲ್ಲಿ ಬೆಳೆದು ಬಂದಿದೆ. ದಾಸರಾಟ, ಬಯಲಾಟ, ಕೃಷ್ಣ ಪಾರಿಜಾತ, ಸಣ್ಣಾಟ, ತಾಳ ಮದ್ದಲೆ ಮೊದಲಾದವು ಕನ್ನಡ ರಂಗಭೂಮಿಯ ವೈಭವ ಸಾರಿವೆ ಎಂದರು.