ಚನ್ನಪಟ್ಟಣ: ತಾಲ್ಲೂಕಿನ ಕಲ್ಲಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಗೆ ಹನ್ನೊಂದು ಮಂದಿ ನೂತನ ನಿರ್ದೇಶಕರಾಗಿ ಆಯ್ಕೆಯಾದರು.
ಶುಕ್ರವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ಸ್ಥಾನದ ನಿರ್ದೇಶಕರಾಗಿ ಕೃಷ್ಣಪ್ಪ, ಕೆ.ಸಿ. ಲೋಕೇಶ್, ಚಿಕ್ಕಯಲ್ಲ ಬೋವಿ, ಸ್ವಾಮಿ, ತಿಮ್ಮಯ್ಯ, ಮಹದೇವ, ಕೆ. ರಾಮಕೃಷ್ಣ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾದರು.
ಹಾಗೆಯೇ ಮಹಿಳಾ ಮೀಸಲು ಸ್ಥಾನದಿಂದ ಜ್ಯೋತಿ, ನಿರ್ಮಲಾ, ಹಿಂದುಳಿದ ವರ್ಗ ‘ಬಿ’ ಸ್ಥಾನದಿಂದ ಕೆ.ಸಿ. ರಮೇಶ್, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ವೀರಭದ್ರಯ್ಯ ಅವಿರೋಧವಾಗಿ ಆಯ್ಕೆಯಾದರು.
ಸಂಘದಲ್ಲಿ ಒಟ್ಟು 13 ನಿರ್ದೇಶಕ ಸ್ಥಾನಗಳಿದ್ದು, ಹನ್ನೊಂದು ಸ್ಥಾನಗಳಿಗೆ ಆಯ್ಕೆ ನಡೆದಿದೆ. ಉಳಿದಂತೆ ಹಿಂದುಳಿದ ವರ್ಗ ‘ಎ’ ಸ್ಥಾನ ಹಾಗೂ ಪರಿಶಿಷ್ಟ ಪಂಗಡ ಮೀಸಲು ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಆ ಎರಡು ಸ್ಥಾನಗಳು ಖಾಲಿ ಉಳಿದಿವೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಬಿ. ರಮ್ಯಶ್ರೀ ತಿಳಿಸಿದರು.
ಚುನಾವಣಾ ಸಹಾಯಕರಾಗಿ ಶ್ರೀಧರಮೂರ್ತಿ, ಬಸವರಾಜು, ಸಂಘದ ಸಿಇಒ ಕೆ.ಎಸ್. ನಾಗೇಂದ್ರ ಹಾಗೂ ಹಾಲು ಪರೀಕ್ಷಕ ಸಣ್ಣೇಗೌಡ ಕಾರ್ಯ ನಿರ್ವಹಿಸಿದರು.