ರಾಮನಗರ: ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಮಾಗಡಿ ಪೊಲೀಸರು ಭಾನುವಾರ ಬೆಳಗ್ಗೆ ಗುಂಡು ಹಾರಿಸಿದ್ದಾರೆ.
ಕಿರಣ್ ಅಲಿಯಾಸ್ ತಮಟೆ ಎಂಬಾತನ ಎಡಗಾಲಿಗೆ ಗುಂಡು ತಗುಲಿದ್ದು, ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಕಾನ್ ಸ್ಟೆಬಲ್ ವೀರಭದ್ರ ಎಂಬುವರೂ ಗಾಯಗೊಂಡಿದ್ದಾರೆ.
ಕಳೆದ ಫೆ. 24ರಂದು ಕುದೂರು ಠಾಣೆ ವ್ಯಾಪ್ತಿಯ ಕಣ್ಣೂರು ಗ್ರಾಮದ ಲೋಕನಾಥ ಸಿಂಗ್ ಎಂಬುವರ ಮನೆಗೆ ನುಗ್ಗಿದ್ದ ಗುಂಪೊಂದು ಅವರ ಮೇಲೆ ಗಂಭೀರ ಹಲ್ಲೆ ಮಾಡಿ ದರೋಡೆ ಮಾಡಿತ್ತು. ಪ್ರಕರಣ ಸಂಬಂಧ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಮುಖ್ಯ ಆರೋಪಿ ಕಿರಣ್ನನ್ನು ಶನಿವಾರ ರಾತ್ರಿ ಬಂಧಿಸಲಾಗಿತ್ತು. ಭಾನುವಾರ ಬೆಳಗ್ಗೆ ಏಳು ಗಂಟೆ ಸುಮಾರಿಗೆ ಆರೋಪಿಯನ್ನು ವಿಚಾರಣೆಗೆಂದು ಕೆಂಗೇರಿ ಬಳಿಯ ಸೂಲಿಕೆರೆ ರಸ್ತೆಯ ಹಳೇ ಬೈರೋಹಳ್ಳಿ ಬಳಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಯು ಕಾನ್ ಸ್ಟೆಬಲ್ ವೀರಭದ್ರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾದ. ಈ ಸಂದರ್ಭ ಸಿಪಿಐ ಮಂಜುನಾಥ ಆರೋಪಿಯ ಕಾಲಿಗೆ ಗುಂಡು ಹಾರಿಸಿದರು ಎಂದು ರಾಮನಗರ ಎಸ್ಪಿ ಅನೂಪ್ ಶೆಟ್ಟಿ ಮಾಹಿತಿ ನೀಡಿದರು.
ಆರೋಪಿ ಕಿರಣ್ ರೌಡಿಶೀಟರ್ ಆಗಿದ್ದು, ಆತನ ವಿರುದ್ಧ ಕೆಂಗೇರಿ, ತಾವರೆಕೆರೆ, ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ 11 ಪ್ರಕರಣಗಳು ದಾಖಲಾಗಿವೆ.