ಇಂತಹದ್ದೊಂದು ಅಭೂತಪೂರ್ವ ಕಾರ್ಯಕ್ರಮ ನಡೆದದ್ದು 2007ರಲ್ಲಿ. ರಾಮನಗರದಲ್ಲಿ ಕಳೆದ ಕೆಲವು ದಶಕಗಳಿಂದ ಚಾಮುಂಡಿ ಕರಗ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಾ ಬರಲಾಗಿದೆ. ಇದಕ್ಕೆಂದೇ ಪ್ರತ್ಯೇಕ ಸಮಿತಿ ಇದ್ದು, ಈ ಸಮಿತಿಯ ನೇತೃತ್ವದಲ್ಲಿ ಕರಗ ಮಹೋತ್ಸವದ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಂತೆಯೇ ಆ ವರ್ಷ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಪಿಬಿ ನೇತೃತ್ವದ ತಂಡ ನೆರೆದ ಸಾವಿರಾರು ಶೋತೃಗಳಿಗೆ ಗಾಯನದ ರಸದೌತಣ ಉಣಬಡಿಸಿತ್ತು. ಹರಿಹರನ್. ಉಷಾ ಉತ್ತುಪ್ಪ, ಮಾಲ್ಗುಡಿ ಶುಭಾ ಮೊದಲಾದವರೂ ಎಸ್ಪಿಬಿ ಜೊತೆ ವೇದಿಕೆಯಲ್ಲಿ ಧ್ವನಿಗೂಡಿಸಿದ್ದರು. ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಹ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಜಿಲ್ಲೆಯಲ್ಲಿ ಎಸ್ಪಿಬಿ ಪಾಲ್ಗೊಂಡ ಏಕೈಕ ಕಾರ್ಯಕ್ರಮ ಅದಾಗಿತ್ತು.