ಚನ್ನಪಟ್ಟಣ: ಮಂಗಳವಾರ ಸಂಜೆ ತಾಲ್ಲೂಕಿನಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ ತಾಲ್ಲೂಕಿನ ಕಳ್ಳಿ ಹೊಸೂರು ಗ್ರಾಮದ ರೈತರೊಬ್ಬರ ಎರಡುವರೆ ಎಕರೆಯಲ್ಲಿ ಬೆಳೆದಿದ್ದ ಗೊನೆಭರಿತ ಬಾಳೆ ಬೆಳೆ ನೆಲಕಚ್ಚಿದೆ.
ಗ್ರಾಮದ ರೈತ ವಿಜಯಕುಮಾರ್ ಅವರಿಗೆ ಸೇರಿದ ಬಾಳೆ ಬೆಳೆ ಬಹುತೇಕ ನೆಲಕಚ್ಚಿದ್ದು, ಘಟನೆಯಲ್ಲಿ ರೂ. 2 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಗೊನೆ ಬಂದಿದ್ದ ಹಾಗೂ ಗೊನೆ ಬರಬೇಕಿದ್ದ ಬಾಳೆಗಿಡಗಳು ಅರ್ಧಕ್ಕೆ ಮುರಿದು ಬಿದ್ದಿವೆ.
ಕಷ್ಟಪಟ್ಟು ಬೆಳೆದ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಪರಿಹಾರ ಕೊಡಿಸಬೇಕು ಎಂದು ರೈತ ವಿಜಯಕುಮಾರ್ ಮನವಿ ಮಾಡಿದ್ದಾರೆ.
ತಾಲ್ಲೂಕಿನ ಹಲವೆಡೆ ತೆಂಗಿನ ಮರಗಳು, ಇತರೆ ಮರಗಳು ಧರೆಗುರುಳಿರುವ ಸುದ್ದಿಗಳು ಬಂದಿವೆ. ಮಾವಿನಕಾಯಿಗಳು ನೆಲಕಚ್ಚಿರುವ ವರದಿಯಾಗಿದೆ.
ಉತ್ತಮ ಮಳೆ: ಮಂಗಳವಾರ ಸಂಜೆ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ಹಲವು ದಿನಗಳಿಂದ ಬಿಸಿಲಲಿನ ಝಳಕ್ಕೆ ಸಿಲುಕಿ ಹೈರಾಣಾಗಿದ್ದ ಜನಕ್ಕೆ ಉತ್ತಮ ಮಳೆ ತಂಪನ್ನೆರೆದಿದೆ. ಉತ್ತಮ ಮಳೆಯ ಲಕ್ಷಣ ಗೋಚರವಾಗಿದ್ದು, ರೈತರು ಹರ್ಷಚಿತ್ತರಾಗಿದ್ದಾರೆ.