ರಾಮನಗರ: ನಗರದ ವಾಸವಿ ವಿದ್ಯಾನಿಕೇತನ ಶಾಲೆಯಲ್ಲಿ ಶುಕ್ರವಾರ ನಡೆದ ಸ್ವಾಮಿ ವಿವೇಕಾನಂದ ಅವರ 161ನೇ ಜಯಂತ್ಯುತ್ಸವ ಹಾಗೂ ಮಕರ ಸಂಕ್ರಾಂತಿಯ ಸಂಭ್ರಮ ಮನೆ ಮಾಡಿತ್ತು. ಶಾಲೆಯ ವಿದ್ಯಾರ್ಥಿಗಳ ವಿವೇಕಾನಂದ ಅವರ ಧಿರಿಸಿನಲ್ಲಿ ಗಮನ ಸೆಳೆದರು. ಅವರ ಆದರ್ಶ ನುಡಿಗಳನ್ನು ಫಲಕಗಳನ್ನು ಬರೆದು ಪ್ರದರ್ಶಿಸಿದರು. ವಿವೇಕಾನಂದರ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ ಕಾರ್ಯದರ್ಶಿ ಪಿ.ವಿ. ಬದರಿನಾಥ್, ‘ವಿವೇಕಾನಂದ ಅವರು ಯುವ ಸಮುದಾಯಕ್ಕೆ ಮಾರ್ಗದಾತರಾಗಿದ್ದಾರೆ ಅವರ ಜೀನವಾದರ್ಶಗಳನ್ನು ಎಲ್ಲರೂ ಪಾಲಿಸಬೇಕು. ಸ್ಫೂರ್ತಿದಾಯಕವಾದ ಅವರ ವಿಚಾರಧಾರೆಗಳನ್ನು ಅರಿತುಕೊಳ್ಳಬೇಕು. ಆಗ ನಮ್ಮ ಜೀವನ ಸುಭಿಕ್ಷವಾಗುತ್ತದೆ’ ಎಂದು ಹೇಳಿದರು.
ಶಿಕ್ಷಕರು ವಿವೇಕಾನಂದ ಅವರ ಕುರಿತು ಮಾತನಾಡಿದರು. ಜಯಂತ್ಯುತ್ಸವದ ಅಂಗವಾಗಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಬಹುಮಾನವಾಗಿ ವಿತರಿಸಲಾಯಿತು.
ಶಾಲೆಯಲ್ಲಿ ಮಕರ ಸಂಕ್ರಾಂತಿ ಹಬ್ಬ ಆಚರಿಸಲಾಯಿತು. ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ಧರಿಸಿ ಬಂದಿದ್ದರು. ಶಿಕ್ಷಕರು ಹಬ್ಬದ ಮಹತ್ವವನ್ನು ತಿಳಿಸಿಕೊಟ್ಟರು. ವೇದಿಕೆಯಲ್ಲಿ ಧಾನ್ಯಗಳ ಮಿನಿ ರಾಶಿಗಳನ್ನು ಪೇರಿಸಲಾಗಿತ್ತು. ಇಡೀ ಶಾಲೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಶಿಕ್ಷಕರು ವಿದ್ಯಾರ್ಥಿಗಳಿಗೆ ಎಳ್ಳು ಬೆಲ್ಲ ವಿತರಿಸಿದರು.
ಶಾಲೆಯ ನಿರ್ದೇಶಕ ಎಂ.ಬಿ. ಜನಾರ್ಧನ್, ಮುಖ್ಯ ಶಿಕ್ಷಕಿ ವಿ.ಕೆ. ವಿಜಯ ಪ್ರಭಾ, ಸಹ ಮುಖ್ಯ ಶಿಕ್ಷಕಿ ಕೆ.ಆರ್. ಚಾರುಮತಿ ಹಾಗೂ ಶಿಕ್ಷಕರು ಇದ್ದರು.