ಚನ್ನಪಟ್ಟಣ: ತಾಲ್ಲೂಕಿನ ಹನುಮಾಪುರದದೊಡ್ಡಿ ಗ್ರಾಮದ ಮಾರಮ್ಮ ದೇವಾಲಯದ ಬಾಗಿಲು ಒಡೆದು ಹುಂಡಿಯಲ್ಲಿದ್ದ ಹಣ ಹಾಗೂ ಸಾವಿರಾರು ರೂಪಾಯಿ ಮೌಲ್ಯದ ಚಿನ್ನದ ತಾಳಿಗಳನ್ನು ಕಳವು ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ದೇವಾಸ್ಥಾನದ ಬಾಗಿಲನ್ನು ಕಬ್ಬಿಣದ ಸಲಾಕೆಗಳಿಂದ ಒಡೆದು ಒಳನುಗ್ಗಿರುವ ಕಳ್ಳರು, ಹುಂಡಿಯನ್ನು ಒಡೆದು ಅದರಲ್ಲಿದ್ದ ಹಣ ಹಾಗೂ ದೇವಿಯ ಮೈಮೆಲಿದ್ದ 5ಕ್ಕೂ ಹೆಚ್ಚು ಚಿನ್ನದ ತಾಳಿಗಳನ್ನು ಕಳವು ಮಾಡಿದ್ದಾರೆ.
ಹಾಗೆಯೇ ಗ್ರಾಮ ಹೊರವಲಯದ ತೋಟದಲ್ಲಿರುವ ಸಣ್ಣಪುಟ್ಟ ದೇವಾಲಯಗಳಾದ ಹನುಮಂತ ದೇವಾಲಯ, ಕ್ಯಾತಮ್ಮ ಕೆಂಪಮ್ಮ ದೇವಾಲಯ ಹಾಗೂ ದಂಡಮ್ಮ ದೇವಾಲಯ ಸೇರಿದಂತೆ ಕೆಲವು ದೇವಾಲಯಗಳಿಗೂ ಕನ್ನ ಹಾಕಿರುವ ಕಳ್ಳರು, ಅಲ್ಲಿದ್ದ ಬೆಲೆಬಾಳುವ ವಸ್ತುಗಳು, ಹುಂಡಿಗಳನ್ನು ದೋಚಿದ್ದಾರೆ.
ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ರಮೇಶ್, ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಬಿ. ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.