ಕುದೂರು(ಮಾಗಡಿ): ಗ್ರಾಮದಲ್ಲಿ ಕೊರೊನಾ ನಿಯಮ ಉಲ್ಲಂಘಿಸಿ ತರಕಾರಿ ಖರೀದಿಸುತ್ತಿದ್ದವರನ್ನು ಪೊಲೀಸರು ಬಿಸಿ ಮುಟ್ಟಿಸಿ ತೆರವುಗೊಳಿಸಿದರು. ಈ ವೇಳೆ ತರಕಾರಿ ಖರೀದಿಸಲು ಬಂದಿದ್ದ ಗ್ರಾ.ಪಂ ಅಧ್ಯಕ್ಷೆ ಭಾಗ್ಯಮ್ಮ ಅವರ ಪತಿ ಚಿಕ್ಕರಾಜು ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು.
ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದೆ ತರಕಾರಿ ಮಾರಾಟ ಮಾಡುತ್ತಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಬೀದಿಬದಿ ತರಕಾರಿ ಮಾರಾಟ ಮಾಡುವವರನ್ನು ಎತ್ತಂಗಡಿ ಮಾಡಿ ಕ್ರೀಡಾಂಗಣದಲ್ಲಿ ಮಾರಾಟ ಮಾಡುವಂತೆ ತಿಳಿಸಿದರು. ಅಲ್ಲಿಂದ ಸರ್ಕಲ್ಗೆ ತೆರಳಿ ಬೀದಿಬದಿ ವ್ಯಾಪಾರ ಮಾಡಲಾರಂಬಿಸಿದರು.
ಮನವಿ: ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ತರಕಾರಿ ಮಾರಾಟಗಾರರನ್ನು ಎತ್ತಂಗಡಿ ಮಾಡಿಸಿದ್ದು ಗೊಂದಲ ಉಂಟಾಗಿದೆ. ಗ್ರಾಮ ಪಂಚಾಯಿತಿಯಿಂದ ತರಕಾರಿ ಮಾರಾಟಗಾರರಿಗೆ ನಿರ್ದಿಷ್ಟ ಸ್ಥಳ ನಿಗದಿಪಡಿಸಬೇಕು ಎಂದು ಬೀದಿಬದಿ ತರಕಾರಿ ಮಾರಾಟಗಾರರು ಮನವಿ ಮಾಡಿದ್ದಾರೆ.