ರಾಮನಗರ: ಎಸ್ಸೆಸ್ಸೆಲ್ಸಿ, ಫಾರ್ಮಸಿ, ಎಂಜಿನಿಯರಿಂಗ್, ಡಿಪ್ಲೊಮಾ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ರದ್ದು ಮಾಡಿ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಬೇಕು ಎಂದು ಆಗ್ರಹಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಐಜೂರು ವೃತ್ತದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬಾರದು, ಈಗಾಗಲೇ ದೆಹಲಿ, ಮಹಾರಾಷ್ಟ್ರ ಸೇರಿ 12 ರಾಜ್ಯಗಳಲ್ಲಿ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದ್ದಾರೆ. ಮುಖ್ಯವಾಗಿ ಮುಂಬೈ ಐಐಟಿ ಪರೀಕ್ಷೆಗಳನ್ನು ರದ್ದು ಮಾಡಿದೆ. ಗೋವಾ ವಿಶ್ವವಿದ್ಯಾಲಯ ಎಲ್ಲಾ ಪದವಿ ಪರೀಕ್ಷೆಗಳನ್ನು ಬಂದ್ ಮಾಡಿ, ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಿದೆ. ರಾಜ್ಯ ಸರ್ಕಾರವೂ ಇಂತಹ ಕ್ರಮ ಕೈಗೊಳ್ಳಬೇಕು. ಜೀವ ಇದ್ದರೆ ಜೀವನ. ಇದನ್ನು ಅರಿತು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆನ್ಲೈನ್ ಶಿಕ್ಷಣವನ್ನು ತಕ್ಷಣವೇ ಕೈಬಿಡಬೇಕು. ಎಷ್ಟೋ ಹಳ್ಳಿಗಳಲ್ಲಿ ಮೊಬೈಲ್ ವ್ಯವಸ್ಥೆ ಇಲ್ಲ. ಮೊಬೈಲ್ ಖರೀದಿ ಮಾಡಲು ಜನರ ಬಳಿ ಹಣ ಇಲ್ಲ. ಈ ಪರಿಸ್ಥಿತಿಯಲ್ಲಿ ಆನ್ಲೈನ್ ಶಿಕ್ಷಣ ಸೂಕ್ತವಲ್ಲ ಎಂದು ಹೇಳಿದರು.
ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ, ಎಂ.ಜಗದೀಶ್, ಗಾಯಿತ್ರಿ ಬಾಯಿ, ಸಿ.ಎಸ್.ಜಯಕುಮಾರ್, ಜಯರಾಮು, ಮರೀಸ್ವಾಮಿ, ಆರ್.ಜೆ. ಅರ್ಜುನ್, ಬಿ.ಸುರೇಶ್, ಶಿವಪ್ರಸಾದ್, ರಾಣಿಕಿರಣ್ ಇದ್ದರು.