ಚನ್ನಪಟ್ಟಣ: ತಾಲ್ಲೂಕಿನ ಮೊಗಳ್ಳಿ ಕೆರೆಯಲ್ಲಿ ಮಂಗಳವಾರ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು, ಬೆಳಿಗ್ಗೆಯಿಂದ ಸಂಜೆಯವರೆಗೂ ಕೆರೆಯಲ್ಲಿಯೇ ನೀರಾಟದಲ್ಲಿ ತೊಡಗಿತ್ತು.
ಹಲಗೂರು ಹಾಗೂ ಇಗ್ಗಲೂರು ಮುಖ್ಯರಸ್ತೆಗೆ ಹೊಂದಿಕೊಂಡಿರುವ ಕೆರೆಯಲ್ಲಿದ್ದ ಸಲಗವನ್ನು ರಸ್ತೆಯಲ್ಲಿ ಹಾದು ಹೋಗುವ ಜನರು ಮತ್ತು ವಾಹನ ಸವಾರರು ಕಣ್ತುಂಬಿಕೊಂಡರು.
ವಿಷಯ ತಿಳಿದ ಪಕ್ಕದ ಹೊಂಗನೂರು ಗ್ರಾಮದ ಜನರು ಕಾಡಾನೆ ನೋಡಲು ತಂಡೋಪತಂಡವಾಗಿ ಬಂದರು. ಜನರ ಗದ್ದಲ ಕೇಳಿದ ಸಲಗ ರಸ್ತೆಯ ಕಡೆಗೆ ಧಾವಿಸಲು ಮುಂದಾಯಿತು. ಆಗ ಕೆಲವರು ಪಟಾಕಿ ಸಿಡಿಸಿದರು.
ಬಿ.ವಿ.ಹಳ್ಳಿ ಅರಣ್ಯ ಪ್ರದೇಶದ ಬೆಟ್ಟಗಳನ್ನು ದಾಟಿ ಬಂದಿರುವ ಕಾಡಾನೆ ಹಾದಿಯಲ್ಲಿ ಬೆಳೆಗಳನ್ನು ಹಾಳು ಮಾಡಿದೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಆನೆಯ ಮೇಲೆ ಮೇಲೆ ನಿಗಾ ಇಟ್ಟು ಕುಳಿತಿದ್ದರು. ಸಂಜೆ ನಂತರ ಒಂಟಿ ಸಲಗವನ್ನು ಕಾಡಿಗೆ ಅಟ್ಟಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.