ಕಾಡಾನೆ ಸ್ಥಳಾಂತರಗೊಳಿಸುವಂತೆ ಈ ಭಾಗದ ಜನರು ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. 2017ರಲ್ಲಿ ಆಗಿನ ಅರಣ್ಯ ಸಚಿವ ರಮಾನಾಥ ರೈ ಆಗುಂಬೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಸ್ಥಳೀಯರೊಂದಿಗೆ ಸಂವಾದ, ಚರ್ಚೆ ನಡೆಸಿ, ಆನೆ ಸ್ಥಳಾಂತರದ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ. ಆನೆ ದಾಂಧಲೆ ದಿನದಿಂದ ದಿನಕ್ಕೆ ಹೆಚ್ಚು ಭಯ ಮೂಡಿಸುತ್ತಿದೆ. ಆಗುಂಬೆ ಭಾಗದ ಜನರ ಗೋಳು ತಿಳಿದಿದ್ದರೂ ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂಬುದು ಸ್ಥಳೀಯರ ಆರೋಪ.