ಸಾಗರ: ‘ತುರ್ತು ಸಂದರ್ಭದಲ್ಲಿ ರಕ್ತದ ಕೊರತೆಯನ್ನು ನೀಗಿಸುವ ಮಹತ್ವದ ಕಾರ್ಯವನ್ನು ರೋಟರಿ ರಕ್ತನಿಧಿ ಕೇಂದ್ರ ನಿರ್ವಹಿಸಿದೆ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಲ್ಲಿನ ರೋಟರಿ ರಕ್ತನಿಧಿ ಕೇಂದ್ರದಲ್ಲಿ ಗುರುವಾರ ನಡೆದ ರೋಟರಿ ರಕ್ತನಿಧಿ ಕೇಂದ್ರದ 5ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕೇಂದ್ರದ ಸಾಧನೆಗಳ ಕುರಿತು ಪ್ರಕಟಗೊಂಡಿರುವ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಇಲ್ಲಿ ರಕ್ತನಿಧಿ ಕೇಂದ್ರ ಆರಂಭಗೊಳ್ಳುವ ಮುನ್ನ ರಕ್ತದ ತುರ್ತು ಅಗತ್ಯವಿರುವ ರೋಗಿಗಳಿಗೆ ಶಿವಮೊಗ್ಗದಿಂದ ತರಿಸಬೇಕಿತ್ತು. ಇದರಿಂದಾಗಿ ರೋಗಿಗಳಿಗೆ ತೀವ್ರ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ರೋಟರಿ ಸಂಸ್ಥೆ ಇಲ್ಲಿಯೇ ರಕ್ತನಿಧಿ ಕೇಂದ್ರ ಸ್ಥಾಪಿಸುವ ಸಾಹಸಕ್ಕೆ ಮುಂದಾಗಿದ್ದು ಶ್ಲಾಘನೀಯ’ ಎಂದರು.
‘ಸಾರ್ವಜನಿಕರು ನಿಯಮಿತವಾಗಿ ರಕ್ತದಾನ ಮಾಡಿದಾಗ ಮಾತ್ರ ರಕ್ತನಿಧಿ ಕೇಂದ್ರ ಸದೃಢವಾಗಿರಲು ಸಾಧ್ಯ. ಜನ್ಮದಿನ, ಮದುವೆ, ಗಣ್ಯರ ಜನ್ಮದಿನ ಹೀಗೆ ಹಲವು ಆಚರಣೆಗಳ ವೇಳೆ ರಕ್ತದಾನ ಶಿಬಿರ ಆಯೋಜಿಸುವುದು ಸೂಕ್ತ’ ಎಂದು ರೋಟರಿ ಸಂಸ್ಥೆ ಅಧ್ಯಕ್ಷೆ ಡಾ.ರಾಜನಂದಿನಿ ಕಾಗೋಡು ಹೇಳಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಪ್ರಮುಖರಾದ ಎಚ್.ಎಂ.ಶಿವಕುಮಾರ್, ಕೆ.ಎನ್.ಶ್ರೀಧರ್, ಬಿ.ಜಿ.ಸಂಗಮ್, ಶಾಂತಕುಮಾರ್ ಇದ್ದರು. ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದವರನ್ನು ಸನ್ಮಾನಿಸಲಾಯಿತು.