ಸೊರಬ: ಕಳೆದ ಬಾರಿ ಮನೆಮುಂಜೂರಾಗಿ ಮನೆ ಕಟ್ಟಿಕೊಳ್ಳದಫಲಾನುಭವಿಗಳಿಗೆ ಮತ್ತೆ ಮನೆನೀಡದೆ ಅಂತಹ ಫಲಾನುಭವಿಗಳನ್ನುಕಪ್ಪುಪಟ್ಟಿಗೆ ಸೇರಿಸುವಂತೆ ಶಾಸಕ ಕುಮಾರ್ ಬಂಗಾರಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಕಚೇರಿಯಲ್ಲಿ ನಡೆದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಕಳೆದ ಬಾರಿ ಮನೆಗಳನ್ನು ನೀಡಿ ಮನೆ ಕಟ್ಟಿಕೊಳ್ಳಲು ಆಗದೆ ಮತ್ತೆ ಈಗ ಮನೆ ನೀಡಿ ಎಂದರೆ ಅಂತಹವರಿಗೆ ಮನೆ ನೀಡಬೇಡಿ. ಹೊಸ ಮನೆಗಳ ಪಟ್ಟಿ ನೀಡಲು ಸರ್ಕಾರ ಜ.31ರ ಕೊನೆ ದಿನ ಎಂದು ಸೂಚಿಸಿದೆ. ಜ. 28ರಂದು ಎಲ್ಲಾ ಪಂಚಾಯಿತಿ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಪಟ್ಟಿಯನ್ನು ನೀಡಬೇಕು ಎಂದರು.
ಅದಕ್ಕೆ ಪ್ರತಿಕ್ರಿಯಿಸಿದತಾಲ್ಲೂಕು ಪಂಚಾಯಿತಿ ಇಒ ಕೆ.ಜಿ.ಕುಮಾರ, ‘ಗ್ರಾಮ ಪಂಚಾಯಿತಿಯಿಂದ ಮನೆಗಾಗಿ 1750 ಅರ್ಜಿಗಳು ಸಲ್ಲಿಕೆಯಾಗಿವೆ’ ಎಂದರು.
ಕೊರೊನಾ ಕಾರಣ ಕೆಲವು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಗಳು ರಜೆ ಇರುವುದರಿಂದ ಗ್ರಾಮಸಭೆ ನಡೆಸಲು ಆಗಿಲ್ಲ. ಶೀಘ್ರ ಸಭೆ ನಡೆಸಿ ಪಟ್ಟಿ ನೀಡಲಾಗುವುದು. ಅಂತಹ ಗ್ರಾಮ ಪಂಚಾಯಿತಿಗಳಲ್ಲಿ ಬದಲಿ ಪಿಡಿಒಗಳನ್ನು ನೇಮಿಸಿ ಮನೆಗಳನ್ನು ಆಯ್ಕೆ ಮಾಡಿ ಎಂದು ಶಾಸಕರು ಹೇಳಿದರು.
ಪಟ್ಟಣದ ಸರ್ವೆ ನಂ. 8ರಲ್ಲಿ ತಾಲ್ಲೂಕಿನ ಎಲ್ಲಾ ಸಮುದಾಯಗಳಿಗೆ ತಲಾ 1.20 ಎಕರೆ ಸೇರಿ ವಿವಿಧ ಸಂಘ–ಸಂಸ್ಥೆಗಳ ಬೇಡಿಕೆಗೆ ಅನುಗುಣವಾಗಿ 69 ನಿವೇಶನವನ್ನು ಗುರುತಿಸುವಂತೆ ಪ್ರಭಾರ ತಹಶೀಲ್ದಾರ್ ಮಂಜುಳಾ ಹೆಗಡ್ಡಾಳ್ ಅವರಿಗೆ ತಿಳಿಸಿದರು.
ಕುಣಜಿಬೈಲು ಎಂಪಿಎಂ ಜಾಗವನ್ನು ಪುರಸಭೆ ವ್ಯಾಪ್ತಿಗೆ ಪಡೆಯಲು ದಾಖಲೆ ಸಿದ್ಧಪಡಿಸಬೇಕು. ತಾಲೂಕಿನಲ್ಲಿ ಈಗಾಗಲೇ ಮುಂಜೂರು ಆಗಿರುವ 120 ಹಾಗೂ ಜಿಲ್ಲಾಧಿಕಾರಿ ಬಳಿ ಇರುವ 66 ಬಗರ್ಹುಕಂ ಸಾಗವಳಿದಾರರಿಗೆ ಕೂಡಲೇ ಪಹಣಿ ನೀಡಬೇಕು. ಮುಜರಾಯಿ ದೇವಸ್ಥಾನದ 9 ಸದಸ್ಯರ ಸಮಿತಿ ರಚನೆ ಮಾಡಿ ಜಿಲ್ಲಾಧಿಕಾರಿಗೆ ಕಳುಹಿಸುವಂತೆ ದೇವಾಲಯ ಸಮಿತಿ ಸದಸ್ಯರಿಗೆ ಶಾಸಕರು ಸೂಚಿಸಿದರು.
ನಗರೋತ್ಥಾನ ಯೋಜನೆಯಡಿ ಆದ್ಯತೆ ಮೇರೆಗೆ ಕಾಮಗಾರಿ ನೀಡುವಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು.
ಪ್ರಭಾರ ತಹಶೀಲ್ದರ್ ಮಂಜುಳಾ ಹೆಗಡ್ಡಾಳ್, ಇಒ ಕೆ.ಜಿ. ಕುಮಾರ, ಸಿಪಿಐ ರಾಜಶೇಖರ್, ಕಂದಾಯ ಅಧಿಕಾರಿಗಳಾದ ವಿಜಯಕುಮಾರ್, ಚನ್ನಕೇಶವ್, ರವಿಕುಮಾರ್, ರಮೇಶ್, ರಾಜಪ್ಪ ಸೇರಿ ಅಧಿಕಾರಿಗಳು ಇದ್ದರು.