ಶಿವಮೊಗ್ಗ: ಬಿಟ್ ಕಾಯಿನ್ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಖಾಲಿ ಡಬ್ಬ ಅಲ್ಲಾಡಿಸುತ್ತಿದ್ದಾರೆ. ಸದ್ದೇನೋ ಜೋರಾಗಿ ಬರುತ್ತಿದೆ. ಆದರೆ, ಒಳಗೆ ಏನೂ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
ನಗರದಲ್ಲಿ ಶನಿವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿಯ ಯಾವ ನಾಯಕ, ಪದಾಧಿಕಾರಿಯೂ ಇಲ್ಲ. ಬಿಜೆಪಿ ಸರ್ಕಾರದ ಮುಖ್ಯಮಂತ್ರಿ, ಸಚಿವರು, ಶಾಸಕರೂ ಇಲ್ಲ. ಕಾಂಗ್ರೆಸ್ಗೆ ತಾಕತ್ತಿದ್ದರೆ ಒಂದು ತುಣುಕು ಕಾಗದದ ದಾಖಲೆ ನೀಡಲಿ ಎಂದು ಸವಾಲು ಎಸೆದರು.
ಕಾಂಗ್ರೆಸ್ ಮುಖಂಡರಿಗೆ ಮಾಡಲು ಕೆಲಸವಿಲ್ಲ. ಹೀಗೆ ಮಾಡಿ ಅಧಿಕಾರ ಕಳೆದುಕೊಂಡರು. ಈಗ ಬಿಟ್ ಕಾಯಿನ್ ವಿಷಯ ಪ್ರಸ್ತಾಪಿಸುತ್ತಾ ಇರುವ ಮರ್ಯಾದೆಯನ್ನೂ ಕಳೆದುಕೊಳ್ಳುತ್ತಿದ್ದಾರೆ. ಬಾಯಿ ಚಪಲಕ್ಕೆ ಬಾಯಿಗೆ ಬಂದಂತೆ ಟೀಕಿಸುತ್ತಿದ್ದಾರೆ ಎಂದು ಕುಟುಕಿದರು.
ಸಚಿವನಾಗಿರುವವರೆಗೂ ಪುತ್ರನಿಗೆ ಅವಕಾಶ ಇಲ್ಲ:
ತಮ್ಮ ಪುತ್ರ ಕೆ.ಇ.ಕಾಂತೇಶ್ಗೆ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೇಳಿಲ್ಲ. ತಾವು ಸಚಿವ ಸ್ಥಾನದಲ್ಲಿ ಇರುವವರೆಗೂ ಶಾಸಕ, ವಿಧಾನ ಪರಿಷತ್ ಚುನಾವಣೆಗೆ ನಿಲ್ಲಿಸುವುದಿಲ್ಲ. ಈ ವಿಷಯ ಹೈಕಮಾಂಡ್ ಗಮನಕ್ಕೂ ತಂದಿರುವೆ ಎಂದು ಪ್ರತಿಕ್ರಿಯಿಸಿದರು.