ಶಿವಮೊಗ್ಗ: ಬ್ರಾಹ್ಮಣರು ಜಾಗತಿಕವಾಗಿ ಯಹೂದಿಗಳಂತೆ ಎದ್ದುನಿಲ್ಲಬೇಕಿದೆ ಎಂದು ಅಂಕಣಕಾರ ರೋಹಿತ್ ಚಕ್ರತೀರ್ಥ ಅಭಿಪ್ರಾಯಪಟ್ಟರು.
ಇಲ್ಲಿನ ವಿಪ್ರ ಬಾಂಧವರ ಸ್ನೇಹ ಬಳಗದಿಂದ ನಗರದಲ್ಲಿ ಗುರುವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಶಾಸಕ ಎಸ್.ಎನ್.ಚನ್ನಬಸಪ್ಪ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಯಹೂದಿಗಳಿಗೆ 2,500 ವರ್ಷಗಳವರೆಗೆ ಜಗತ್ತಿನಲ್ಲಿ ನೆಲೆಯೇ ಇರಲಿಲ್ಲ. ಆದರೂ ಜ್ಞಾನಾರ್ಥಿಗಳಾಗಿ ವಿಶ್ವಕ್ಕೆ ಮಾರ್ಗದರ್ಶನ ಮಾಡುತ್ತಾ ಬದುಕಿದರು. ಅವರು ವಿಶ್ವದಾದ್ಯಂತ ಶೇ 5 ರಷ್ಟು ಇದ್ದಾರೆ. ಆದರೆ ಎಲ್ಲರೂ ಅವರನ್ನ ಒಪ್ಪಿಕೊಂಡು ಬದುಕುವಂತೆ ಸಾಧಿಸಿ ತೋರಿಸಿಕೊಟ್ಟಿದ್ದಾರೆ. ಕಸಗುಡಿಸುವ ಕೆಲಸವನ್ನೂ ಅವರು ಶ್ರದ್ಧೆಯಿಂದ ಮಾಡುತ್ತಾರೆ.
ಜಗತ್ತಿನಲ್ಲಿ ಬೌದ್ಧಿಕ ಶಕ್ತಿಯಾಗಿ ಬದುಕುವುದು ಅವರ ಗುರಿಯಾಗಿತ್ತು. ಇಂದು ಯಾವುದೇ ರಂಗದಲ್ಲೂ ಯಹೂದಿಗಳಿದ್ದಾರೆ. ಬ್ರಾಹ್ಮಣರು ಅವರನ್ನು ಅನುಸರಿಸುವ ಅನಿವಾರ್ಯತೆ ಎದುರಾಗಿದೆ. ಆರ್ಥಿಕವಾಗಿ ನಾವೂ ಪ್ರಬಲರಾಗಬೇಕು. ಆಗ ಯಾರ ಮುಂದೆಯೂ ತಲೆತಗ್ಗಿಸಬೇಕಿಲ್ಲ ಎಂದು ಹೇಳಿದರು.