ಶಿವಮೊಗ್ಗ: ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಗುರುವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್.ಸಿ.ಯೋಗೀಶ್ ಭೇಟಿ ನೀಡಿ ಜನರ ಅಹವಾಲು ಆಲಿಸಿದರು.
ಜೆ.ಸಿ.ನಗರ, ಅಶೋಕ ನಗರ, ರಾಜೀವ್ಗಾಂಧಿ ಬಡಾವಣೆ, ಚೌಡೇಶ್ವರಿ ಕಾಲೊನಿ ಪ್ರದೇಶಗಳಿಗೆ ಭೇಟಿ ನೀಡಿದರು. ಪಾಲಿಕೆಕೈಗೊಂಡ ಕ್ರಮಗಳ ಮಾಹಿತಿ ಪಡೆದರು. ಬಿದ್ದ ಮನೆಗಳ ಅವಶೇಷ ವೀಕ್ಷಿಸಿದರು.
ಮಳೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ನೀಡುತ್ತಿದ್ದಾರೆ. ಶೇ 75ಕ್ಕಿಂತ ಹೆಚ್ಚು ಹಾನಿಗೆ ₹ 5 ಲಕ್ಷ, ಭಾಗಶಃ ಮನೆಗಳಿಗೆ ₹ 3 ಲಕ್ಷ, ಶೇ 25ಕ್ಕಿಂತ ಕಡಿಮೆ ಹಾನಿಗೆ ₹ 50 ಸಾವಿರ ನೀಡಲಾಗುತ್ತಿದೆ. ಪರಿಹಾರ ನೀಡುವ ಪ್ರಕ್ರಿಯೆ ಹಲವು ಹಂತಗಳನ್ನು ದಾಟಬೇಕಿದೆ. ಈ ಪ್ರಕ್ರಿಯೆ ಸರಳಗೊಳಿಸಬೇಕು ಎಂದು ಯೋಗೀಶ್ ಒತ್ತಾಯಿಸಿದರು.
ಖಾತೆ ಇಲ್ಲದ ಕುಟುಂಬಗಳಿಗೆ ನೆರವು ನೀಡುತ್ತಿಲ್ಲ. ಇದು ತಾರತಮ್ಯ. ಅಂತಹ ಬಡವರ ಸ್ಥಿತಿ ಶೋಚನೀಯವಾಗಿದೆ. ಅವರಿಗೂ ಮಾನವೀಯತೆ ಆಧಾರದಲ್ಲಿ ನೆರವು ನೀಡಬೇಕು. ಹಿಂದಿನ ಮಳೆಗಾಲದಲ್ಲಿ ಮನೆ ಕಳೆದುಕೊಂಡವರಿಗೆ ಬಾಕಿ ಇರುವಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್, ಯಮುನಾ ರಂಗೇಗೌಡ, ಮೆಹಕ್ ಷರೀಫ್, ಪಿ.ವಿ.ವಿಶ್ವನಾಥ್, ಕೆ.ರಂಗನಾಥ್, ಪ್ರವೀಣ್ ಕುಮಾರ್ ಇದ್ದರು.