ಸೊರಬ: ಜೀವದ ಹಂಗು ತೊರೆದು ವೃತ್ತಿಯ ಜೊತೆಗೆ ಮಾನವೀಯತೆಯಿಂದ ಕಾರ್ಯನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್ ಸೇವೆ ಶ್ಲಾಘನೀಯ ಎಂದು ಸಾಹಿತಿ ಡಾ. ನಾ. ಡಿಸೋಜ ಹೇಳಿದರು.
ಪಟ್ಟಣದ ಹಳೇಸೊರಬ ಅಮರಜ್ಯೋತಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸಮಾಜ ಸೇವಕ ಹಾಗೂ ಬಿಎಸ್ಎನ್ಎಲ್ ನಿವೃತ್ತ ಅಧಿಕಾರಿ ವೇಣುಗೋಪಾಲ್ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೊರೊನಾ ವಾರಿಯರ್ಸ್ಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವೀಯ ಗುಣಗಳು ಕಣ್ಮರೆಯಾಗುತ್ತಿರುವ ಕಾಲದಲ್ಲಿ ಕುಟುಂಬ ಮತ್ತು ವೈಯುಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ಸಮಾಜದ ಪ್ರತಿಯೊಬ್ಬರ ರಕ್ಷಣೆಗೆ ಕೊರೊನಾ ವಾರಿಯರ್ಸ್ ಹಗಲಿರುಳು ಶ್ರಮಿಸುತ್ತಿದ್ದಾರೆ. ಇದರಿಂದ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಸಮಾಜದಲ್ಲಿ ಕೊರೊನಾ ವಾರಿಯರ್ಸ್ಗಳನ್ನು ಅನುಮಾನದಿಂದ ನೋಡುವುದು ತಪ್ಪು. ಪ್ರತಿಯೊಬ್ಬರೂ ಅವರನ್ನು ಗೌರವದಿಂದ ಕಾಣಬೇಕು ಎಂದು ಸಲಹೆ ನೀಡಿದರು.
ಸಮಾಜ ಸೇವಕ ವೇಣುಗೋಪಾಲ್ ದಂಪತಿ ಕೊರೊನಾ ವಾರಿಯರ್ಗಳನ್ನು ಸನ್ಮಾನಿಸುತ್ತಿರುವುದು ಸ್ವಾಗತಾರ್ಹ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಾಜ ಸೇವಕ ವೇಣುಗೋಪಾಲ್, ‘ಕುಟುಂಬದ ಜವಾಬ್ದಾರಿಯ ನಡುವೆ ಕೊರೊನಾ ವಾರಿಯರ್ಸ್ ಸಮಾಜದ ಪೋಷಕರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲರೂ ಮನೆಯಲ್ಲಿ ಸುರಕ್ಷಿತವಾಗಿರುವ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಮಾಧ್ಯಮದವರು ಕಾರ್ಯನಿರ್ವಹಿಸಿರುವುದನ್ನು ಕಂಡು ಕೃತಜ್ಞತಾಪೂರ್ವಕವಾಗಿ ಅಭಿನಂದಿಸಲಾಗುತ್ತಿದೆ’ ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರು, ಪತ್ರಕರ್ತರು, ಆರೋಗ್ಯ, ಪೊಲೀಸ್ ಇಲಾಖೆ ಹಾಗೂ ತಾಲ್ಲೂಕು ಕಚೇರಿ ಅಧಿಕಾರಿ, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಮಂಗಳೂರು ಉಪ ವಿಭಾಗಾಧಿಕಾರಿ ದೇವರಾಜ್ ಚಿಮಣೂರು, ಪಿಎಸ್ಐ ಟಿ.ಬಿ. ಪ್ರಶಾಂತ್ ಕುಮಾರ್ ಮಾತನಾಡಿದರು.
ವಕೀಲ ವೈ.ಜಿ. ಪುಟ್ಟಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್ ಶಿವಾನಂದ್ ರಾಣೆ, ತಾಲ್ಲೂಕು ಆರೋಗ್ಯಾಧಿಕಾರಿ ಅಕ್ಷತಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅರುಂಧತಿ ಕಾಳೆ, ಸಿಸ್ಟರ್ ಹಿಲ್ಡಾಗಾರ್ಡ್, ಮಂಜಪ್ಪ, ರಾಗಿಣಿ ವೇಣುಗೋಪಾಲ್, ಡಾ. ಎಂ.ಕೆ. ಭಟ್, ಜಿ.ಡಿ. ನಾಯ್ಕ್, ಆರ್.ಬಿ. ಚಂದ್ರಪ್ಪ, ಪೂರ್ಣಿಮಾ ಭಾವೆ, ಎನ್.ಕೆ. ಲಿಂಗೇಶ್, ಸುಬ್ರಾಯ ಹಳ್ಳೇರ್, ಎಸ್.ಎಂ. ನೀಲೇಶ್, ಪ್ರಜ್ವಲ್ ಚಂದ್ರಗುತ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.