ಶಿವಮೊಗ್ಗ: ಅತಿಥಿ ಉಪನ್ಯಾಸಕ ಹುದ್ದೆಯ ನೇಮಕಾತಿಗೆ ಲಂಚ ಪಡೆದರೂ ಆದೇಶ ಕೊಡಲು ವಿಳಂಬ ಮಾಡಿದ ಕಾರಣ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಅವರಿಗೆ ವ್ಯಕ್ತಿಯೊಬ್ಬರು ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾದ ಆಡಿಯೊ ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಆದರೆ ಆಡಿಯೊ ಸಂಭಾಷಣೆಯನ್ನು ಪ್ರೊ.ಬಿ.ಪಿ.ವೀರಭದ್ರಪ್ಪ ನಿರಾಕರಿಸಿದ್ದಾರೆ.
‘ನನಗೂ ಆ ಸಂಭಾಷಣೆಯನ್ನು ಯಾರೋ ಕಳುಹಿಸಿದ್ದರು. ಕೇಳಿಸಿಕೊಂಡಿದ್ದೇನೆ. ಅದರಲ್ಲಿ ಮಾತನಾಡಿರುವುದು ನಾನಲ್ಲ. ಬದಲಿಗೆ ನನ್ನ ಧ್ವನಿಯನ್ನು ಯಾರೋ ಅನುಕರಣೆ ಮಾಡಿ ತೇಜೋವಧೆಗೆ ಪ್ರಯತ್ನಿಸಿದ್ದಾರೆ. ನಾನು ಯಾರಿಂದಲೂ ಹಣ ಪಡೆದು ಕೆಲಸದ ಆದೇಶ ಪತ್ರ ಕೊಟ್ಟಿಲ್ಲ’ ಎಂದು ಪ್ರತಿಕ್ರಿಯಿಸಿದರು.
ಸಂಭಾಷಣೆ ಸಾರ: ‘ಬೈಕ್ ಮಾರಾಟ ಮಾಡಿ ನಿಮಗೆ ₹90,000 ಕೊಟ್ಟಿದ್ದೇನೆ. ಆದರೂ ನೀವು ನನಗೆ ಅತಿಥಿ ಉಪನ್ಯಾಸಕ ಕೆಲಸದ ಆದೇಶ ಕೊಡಿಸಲಿಲ್ಲ. ಈಗ ಬೇರೆ ಕಡೆ ಕಮಿಟ್ ಆಗಿ ಕೆಲಸಕ್ಕೆ ಹೋಗುತ್ತಿದ್ದೇನೆ. ದಯವಿಟ್ಟು ನನಗೆ ಹಣ ವಾಪಸ್ ಕೊಡಿ’ ಎಂದು ಆಡಿಯೊದಲ್ಲಿ ವ್ಯಕ್ತಿಯೊಬ್ಬರು ಕೇಳುತ್ತಾರೆ.