ಕಾರ್ಗಲ್: ಸಮೀಪದ ಶರಾವತಿ ಸಿಂಗಳೀಕ ವನ್ಯಜೀವಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆ ಮಾಡಿದ ಆರೋಪದ ಮೇಲೆ ಗುರುವಾರ ಮೂವರನ್ನು ಬಂಧಿಸಲಾಗಿದೆ.
ಶರಾವತಿ ಸಿಂಗಳೀಕ ವನ್ಯಜೀವಿ ಅಭಯಾರಣ್ಯದ ಅಂಬಾರಗೋಡ್ಲು ಹಿನ್ನೀರಿನ ದಡದಲ್ಲಿ ನಾಡ ಬಂದೂಕಿನಿಂದ ಜಿಂಕೆಯನ್ನು ಬುಧವಾರ ರಾತ್ರಿ ಹತ್ಯೆ ಮಾಡಿದ ಆರೋಪಿಗಳು, ಅದನ್ನು ಪಾಲು ಮಾಡಿಕೊಳ್ಳುತ್ತಿರುವ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಯಿತು.
ವಲಯ ಅರಣ್ಯಾಧಿಕಾರಿ ಸಂಧ್ಯಾ, ಉಪ ವಲಯ ಅರಣ್ಯಾಧಿಕಾರಿ ಜಿ.ಕೆ. ಸುಧಾಕರ್, ವನಪಾಲಕರಾದ ಮಹೇಶ್ ಬಮ್ಮನಹಳ್ಳಿ ಅವರ ತಂಡ ಬೇಟೆಗಾರರನ್ನು ಬಂಧಿಸಿದೆ. ಗೆಣಸಿನಕುಣಿ ಸಾಕಳಲು ಗ್ರಾಮದ ಬಾಳೆಕೊಪ್ಪ ನಿವಾಸಿ ಸತೀಶ, ಆನಂದಪುರ ಯಡೇಹಳ್ಳಿ ಗ್ರಾಮದ ನಾಗರಾಜ ಮತ್ತು ಪ್ರಜ್ವಲ್ ಬಂಧಿತರು.
ಆರೋಪಿಗಳ ವಿರುದ್ಧ ವನ್ಯಜೀವಿ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ, ಜಿಂಕೆಯ ಚರ್ಮ, ತಲೆ ಮತ್ತು ನಾಡ ಬಂದೂಕು ವಶಪಡಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಸಂಧ್ಯಾ ಮಾಹಿತಿ ನೀಡಿದ್ದಾರೆ.