ತೀರ್ಥಹಳ್ಳಿ: ಗುಮ್ಮಿ, ಕೆರೆ ನೀರು ಕುಡಿಯುತ್ತಿದ್ದ ಗ್ರಾಮೀಣರಿಗೆ ಶಾಶ್ವತವಾಗಿ ಶುದ್ಧ ಕುಡಿಯುವ ನೀರು ಪೂರೈಕೆಯಾಗಲಿದೆ. ತಾಲ್ಲೂಕಿನ ಜೆಜೆಎಂ ಯೋಜನೆಗೆ ಕೇಂದ್ರ ಸರ್ಕಾರದಿಂದ ಅಂದಾಜು ₹ 500 ಕೋಟಿ ಅನುದಾನ ಲಭಿಸಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಶನಿವಾರ ಹಿರೇಸರ ಗ್ರಾಮದಲ್ಲಿ ₹68 ಲಕ್ಷ ವೆಚ್ಚದ ಜಲಜೀವನ್ ಮಿಷನ್ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕುಡಿಯುವ ನೀರು ಪೂರೈಕೆಗೆ ಹಲವಾರು ತೊಂದರೆಗಳು ಇದ್ದವು. ಮೋಟರ್ ಹಾಳಾಗುವುದು, ವಿದ್ಯುತ್ ಕೊರತೆ, ನೀರಿನ ಮೂಲ ಇಲ್ಲದ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ನೀರು ಕೊಡಲು ಸಾಧ್ಯವಾಗುತ್ತಿರಲಿಲ್ಲ. ₹344 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರು ಯೋಜನೆಯಿಂದ ಎಲ್ಲರಿಗೂ ಶುದ್ಧ ಕುಡಿಯುವ ನೀರು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಪಂಚಾಯಿತಿ ಸದಸ್ಯರು ನೀರು ಪೂರೈಕೆಗೆ ಶತಾಯಗತಾಯ ಪ್ರಯತ್ನಿಸಿದರೂ, ಕೆಲವು ಭಾಗದಲ್ಲಿ ನೀರೇ ಇಲ್ಲ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಪೈಪ್ಗಳು ಇಲ್ಲದೇ ಮನೆಯ ನಲ್ಲಿ ಸಂಪರ್ಕ ಸಾಧ್ಯವಾಗಿರಲಿಲ್ಲ. ಜೆಜೆಎಂ ಯೋಜನೆ ಅಸಾಧ್ಯವಾದ ಸಂಗತಿಯನ್ನು ಸಾಧ್ಯವಾಗಿಸಿದೆ. ಶುದ್ಧ ಕುಡಿಯುವ ನೀರು ಗ್ರಾಮೀಣರ ಆರೋಗ್ಯ ವೃದ್ಧಿಸಲಿದೆ’ ಎಂದರು.
ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ಪವಾರ್, ಉಪಾಧ್ಯಕ್ಷ ಜಯಣ್ಣ, ಮಾಜಿ ತಾ.ಪಂ. ಸದಸ್ಯರಾದ ಟಿ. ಮಂಜುನಾಥ್, ಭಾರತಿ ಸುರೇಶ್, ಮುಖಂಡರಾದ ಗುರುಮೂರ್ತಿ, ಗಿರೀಶ್ ಬಂಡಾರಿ ಇದ್ದರು.