ಶಿವಮೊಗ್ಗ: ಮಹಿಳೆಯರ ಸಬಲೀಕರಣವಾದರೆ ಇಡೀ ಕುಟುಂಬವೇ ಸಶಕ್ತವಾಗುತ್ತದೆ. ಮಹಿಳೆಯರು ಸ್ವಾವಲಂಬಿಗಳಾಗಲು ಪ್ರಯತ್ನಿಸಬೇಕು ಎಂದು ರೋಟರಿಮಾಜಿಜಿಲ್ಲಾ ಗವರ್ನರ್ ಬಿ.ಎನ್. ರಮೇಶ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ವತಿಯಿಂದ ಗ್ಲೋಬಲ್ ಗ್ರ್ಯಾಂಟ್ ಅಡಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಡ ಮಹಿಳೆಯರಿಗೆ ಗೋವುಗಳ ದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗೋದಾನ ಕಾರ್ಯಕ್ರಮವು ಶ್ರೇಷ್ಠವಾದುದು. ಎಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.
ಮಹಿಳೆಯರಿಗೆ ಗೋವುಗಳನ್ನು ದಾನ ಮಾಡಿ ಮಾತನಾಡಿದರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ರಾಜಾರಾಮ್ ಭಟ್, ‘ಗೋಮಾತೆಯ ಸೇವೆಯಿಂದ ಸಿಗುವ ಪುಣ್ಯಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ.ಪುರಾಣಗಳಲ್ಲಿ ಉಲ್ಲೇಖಿಸಿದಂತೆ ಗೋವಿನಲ್ಲಿರುವ ಕೋಟ್ಯಂತರ ದೇವತೆಗಳ ಅನುಗ್ರಹ ನಮಗೆ ಲಭಿಸುತ್ತದೆ’ ಎಂದು ಹೇಳಿದರು.
ಸುನೀತಾ ಶ್ರೀಧರ್, ‘ಕೆಲ ತಿಂಗಳ ಹಿಂದೆಯೇ ಆಗಬೇಕಿದ್ದ ಕಾರ್ಯಕ್ರಮ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಇದೀಗ ತಡವಾಗಿಯಾದರೂ ಬಡಮಹಿಳೆಯರಿಗೆ ಗೋದಾನ ಮಾಡುವ ಮೂಲಕ ಸಾರ್ಥಕ ಕಾರ್ಯ ಮಾಡಿದ ಭಾವ ಮೂಡಿಸಿದೆ. ನನ್ನ ಕನಸಿನ ಯೋಜನೆ ಸಾಕಾರಗೊಂಡಿದೆ’ ಎಂದು ಹೇಳಿದರು.
ಡಾ.ಪಿ. ನಾರಾಯಣ, ‘ಈವರೆಗೂ ಶಿವಮೊಗ್ಗ ಕ್ಲಬ್ನಿಂದ 300 ಹಸುಗಳನ್ನು ಬಡವರಿಗೆ ನೀಡಲಾಗಿದೆ. ಅದರ ಸದುಪಯೋಗ ಪಡಿಸಿಕೊಳ್ಳಬೇಕು. ಗೋವುಗಳಿಂದ ಕಷ್ಟದಲ್ಲಿರುವ ಬಡ ಮಹಿಳೆಯರ ಕುಟುಂಬವು ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಿದೆ’ ಎಂದು ಹೇಳಿದರು.
ಶಿವಮೊಗ್ಗ ಕ್ಲಬ್ ಅಧ್ಯಕ್ಷ ಎಚ್.ಎಸ್.ಮೋಹನ್ ಮಾತನಾಡಿದರು. ರಿಪ್ಪನ್ಪೇಟೆ ಮತ್ತು ಮತ್ತೂರಿನ 70 ಬಡ ಕುಟುಂಬದ ಮಹಿಳೆಯರಿಗೆ ಹಸುಗಳನ್ನು ನೀಡಲಾಯಿತು.
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್, ಪಟ್ಟಾಭಿರಾಮ್, ಎಸ್.ದತ್ತಾತ್ರಿ, ವಲಯ 10ರ ಸಹಾಯಕ ಗವರ್ನರ್ ಶ್ರೀಧರ್, ಜಿ. ವಿಜಯ್ಕುಮಾರ್, ವೀರಣ್ಣ, ರಾಜಣ್ಣ, ಲಕ್ಷ್ಮೀದೇವಿ ಗೋಪಿನಾಥ್, ವೀರಣ್ಣ ಹುಗ್ಗಿ, ಗೋಪಾಲಕೃಷ್ಣ, ವೆಂಕಟರಮಣ ಜೋಯ್ಸ್, ಡಿ.ಎಸ್.ನಟರಾಜ್, ಎ.ಮಂಜುನಾಥ್, ದ್ವಾರಕನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.