ಶಿವಮೊಗ್ಗ: ತಾಲ್ಲೂಕಿನ ದುಮ್ಮಳ್ಳಿಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ದುಮ್ಮಳ್ಳಿಯಲ್ಲಿ ಹಾಲಿನ ಅಂಗಡಿ ನಡೆಸುತ್ತಿದ್ದ ಶೋಭಾ ಕೊಲೆಯಾದವರು.
ಶೋಭಾ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿಯವರು. ಪತಿ ಪ್ರಕಾಶ್ ಜೊತೆ ದುಮ್ಮಳ್ಳಿಯಲ್ಲಿ ವಾಸವಿದ್ದರು. ದಂಪತಿಯ ಇಬ್ಬರು ಮಕ್ಕಳ ಪೈಕಿ ಮಗಳಿಗೆ ಮದುವೆ ಆಗಿದ್ದು, ಮಗ ಈಚೆಗೆ ಅಪಘಾತದಲ್ಲಿ ಮೃತಪಟ್ಟಿದ್ದರು. ಸಂಸಾರದಲ್ಲಿ ಬಿರುಕು ಬಿಟ್ಟ ಕಾರಣ ಶೋಭಾ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇಬ್ಬರ ನಡುವಿನ ವೈಮನಸ್ಸಿನಲ್ಲಿ ಶೋಭಾ ಪತಿಯ ವಿರುದ್ಧ ದೂರು ದಾಖಲಿಸಿದ್ದರು ಎನ್ನಲಾಗಿದೆ.
ಕೊಲೆ ನಡೆದ ಸ್ಥಳದಲ್ಲಿ ಖಾರದಪುಡಿ, ಎರಡು ಚಾಕು, ಇಟ್ಟಿಗೆ ಚೂರು ಸಿಕ್ಕಿದ್ದು, ಆರೋಪಿ ಪ್ರಕಾಶ್ ಪೊಲೀಸರಿಗೆ ಶರಣಾಗಿದ್ದಾನೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.