ಹೊಸನಗರ: ‘ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಲು ಸಂಚು ರೂಪಿಸಿರುವ ತ್ರಿಣಿವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಎಲ್.ಚಂದ್ರಶೇಖರ ನಕಲಿ ಭೂ ಹಕ್ಕುಪತ್ರ ಸೃಷ್ಟಿ ಮಾಡಿಕೊಂಡಿದ್ದಾರೆ’ ಎಂದು ತ್ರಿಣಿವೆ ಗ್ರಾಮಸ್ಥರು ಆರೋಪಿಸಿದ್ದಾರೆ.
ತಹಶೀಲ್ದಾರ್ ಎಸ್.ವಿ.ರಾಜೀವ್ ಅವರಿಗೆ ಮನವಿ ಸಲ್ಲಿಸಿರುವ ಗ್ರಾಮಸ್ಥರು, ‘ಪ್ರಕರಣ ಕುರಿತು ಸೂಕ್ತ ತನಿಖೆ ನಡೆಸಿ, ಚಂದ್ರಶೇಖರ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ತ್ರಿಣಿವೆ ಗ್ರಾಮದ ಸರ್ವೆ ನಂಬರ್ 83ರಲ್ಲಿನ ಕಾನು ಪ್ರದೇಶದ ಜಾಗ ಕಬಳಿಕೆ ಮಾಡಲು ಯತ್ನಿಸಿದ್ದಾರೆ. ನಗರ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಎರಡು ಪ್ರಕರಣ ದಾಖಲಾಗಿವೆ. ಗ್ರಾಮಸ್ಥರು ಈ ಕುರಿತು ಹೋರಾಟ ನಡೆಸುತ್ತಿದ್ದಾರೆ. ಖಾಲಿ ಜಾಗದಲ್ಲಿ ಗ್ರಾಮ ಪಂಚಾಯಿತಿಯಿಂದ ಡಿಮ್ಯಾಂಡ್ ರಿಜಿಸ್ಟಾರ್ಡ್ ದಾಖಲಿಸಿದ್ದಾರೆ. ಅಕ್ರಮ ಕಟ್ಟಡ ಮಂಜೂರಾತಿ ಹಕ್ಕು ಪತ್ರದ ನಕಲು ಪ್ರತಿ ನೀಡಿದ್ದಾರೆ. ತಾಲ್ಲೂಕು ಕಚೇರಿ ಮಾಹಿತಿ ಪ್ರಕಾರವೂ ಅವರ ಹೆಸರಿನಲ್ಲಿ ಯಾವುದೇ ಮಂಜೂರಾತಿ ಮಾಹಿತಿ ಇಲ್ಲ ಎಂದು ಗ್ರಾಮಸ್ಥರು ದಾಖಲೆ ಬಿಡುಗಡೆ ಮಾಡಿದ್ದಾರೆ.
ಕಬಳಿಕೆ ವಿರುದ್ಧ ತನಿಖೆ ನಡೆಸಬೇಕು. ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರಾದ ಪ್ರಕಾಶ್ ಶೆಟ್ಟಿ, ನರೇಂದ್ರ ಮಾನಿ, ಶಶಿಧರ್ ನಾಶ್ರೀ, ಶ್ರೀಧರ್, ಸಂದೀಪ ಗೌಡ, ಕುಮಾರಗೌಡ, ದೇವೇಂದ್ರ ಮತ್ತಿತರರು ಆಗ್ರಹಿಸಿದ್ದಾರೆ.