ಸೊರಬ: ‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಸ್ವತಂತ್ರವಾಗಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಚುನಾವಣೆಗೆ ಕೆಲವರ ಹೆಸರನ್ನು ಪಟ್ಟಿ ಮಾಡಿದ್ದು, ಆ ಪಟ್ಟಿಯಲ್ಲಿ ನನ್ನ ಹೆಸರು ಇರುವುದು ಸಂತಸ ತಂದಿದೆ’ ಎಂದು ಮುಖಂಡ ಬಾಸೂರು ಚಂದ್ರೇಗೌಡ ಹೇಳಿದರು.
ಶುಕ್ರವಾರ ನಡೆದ ತಾಲ್ಲೂಕು ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಒಂದು ವರ್ಷದಿಂದ ತಾಲ್ಲೂಕಿನಲ್ಲಿ ಪಕ್ಷ ಸಂಘಟಿಸುವ ಬಗ್ಗೆ ವರಿಷ್ಠರು ವೀಕ್ಷಕರಿಂದ ವರದಿ ತರಿಸಿಕೊಂಡಿದ್ದರು. ಅದರಂತೆ ಕಾರ್ಯಕರ್ತರ ಒತ್ತಾಸೆಯನ್ನು ಪರಿಗಣಿಸಿ ನನ್ನ ಹೆಸರು ಪರಿಗಣಿಸಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರವಾರು ಸಂಚರಿಸಿ ಮತ್ತಷ್ಟು ಪಕ್ಷ ಗಟ್ಟಿಗೊಳಿಸಲು ಶ್ರಮಿಸುತ್ತೇನೆ’ ಎಂದು ಹೇಳಿದರು.
‘ಈಗಾಗಲೇ 123 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಉಳಿದಿರುವ 101 ಕ್ಷೇತ್ರಕ್ಕೆ ಜನಸಾಮಾನ್ಯರ ಕಷ್ಟಕ್ಕೆ ಶ್ರಮಿಸುವ ಹಾಗೂ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುವ ವ್ಯಕ್ತಿಯನ್ನು ಪರಿಗಣಿಸುವ ಭರವಸೆ ನೀಡಿದ್ದು, ತಾಲ್ಲೂಕಿನಲ್ಲಿ ಜೆಡಿಎಸ್ ಬಲಿಷ್ಠವಾರುವುದರಿಂದ ಅಧಿಕಾರ ಹಿಡಿಯವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆನವಟ್ಟಿ ಬ್ಲಾಕ್ ಅಧ್ಯಕ್ಷ ಶಿವಪ್ಪ ಮಾತನಾಡಿ, ‘ತಾಲ್ಲೂಕಿನಲ್ಲಿ ಪಕ್ಷ ಸಂಘಟಿಸಲು ಬೂತ್ ಮಟ್ಟದಲ್ಲಿ ಸಭೆ ನಡೆಸಲಾಗುವುದು. ಪಕ್ಷದ ಆದೇಶದ ಮೇರೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಲಾಗುವುದು’ ಎಂದು ತಿಳಿಸಿದರು.
ಸೊರಬ ಬ್ಲಾಕ್ ಅಧ್ಯಕ್ಷ ಕೆ. ಅಜ್ಜಪ್ಪ, ರಾಜ್ಯ ಕಾರ್ಯದರ್ಶಿ ಎನ್. ಕುಮಾರ್, ಮುಖಂಡರಾದ ಪುಂಡಲೀಕಪ್ಪ, ದ್ಯಾವಪ್ಪ, ಪ್ರಶಾಂತ್, ಬಸವನಗೌಡ, ತುಳಜಪ್ಪ, ನಾರಾಯಣ, ಆನಂದನಾಯ್ಕ್ ಇದ್ದರು.