ಶಿವಮೊಗ್ಗ: ದಾವಣಗೆರೆ ನಗರಕ್ಕೆ ಕುಡಿಯುವ ನೀರಿನ ಸಲುವಾಗಿ ಭದ್ರಾ ಜಲಾಶಯದಿಂದ ಬಲದಂಡೆ ನಾಲೆಗೆ ಶನಿವಾರ ಮಧ್ಯರಾತ್ರಿಯಿಂದಲೇ 500 ಕ್ಯುಸೆಕ್ ನೀರು ಹರಿಸಲು ಭದ್ರಾ ಕಾಡಾ ಮಂಡಳಿಯು ನಿರ್ಧರಿಸಿದೆ.
ದಾವಣಗೆರೆಯ ಕುಂದವಾಡ ಕೆರೆಯಲ್ಲಿ ಜಲ ಸಂಗ್ರಹ ಇಲ್ಲದೇ ಇರುವುದರಿಂದ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಹೀಗಾಗಿ ನಾಲೆಗೆ ನೀರು ಹರಿಸಬೇಕು ಎಂದು ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಅವರು ಭದ್ರಾ ಕಾಡಾ ಮಂಡಳಿಯನ್ನು ಕೋರಿದ್ದರು. ಇದಕ್ಕೆ ಸ್ಪಂದಿಸಿರುವ ಕಾಡಾ ಮಂಡಳಿಯು, ಬಲದಂಡೆ ನಾಲೆಗೆ ಶನಿವಾರ ಮಧ್ಯರಾತ್ರಿಯಿಂದಲೇ 500 ಕ್ಯುಸೆಕ್ ನೀರು ಹಾಗೂ ಭಾನುವಾರ ರಾತ್ರಿಯಿಂದ 1,000 ಕ್ಯುಸೆಕ್ ನೀರು ಹರಿಸಲು ಸಮ್ಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
186 ಅಡಿ ಗರಿಷ್ಠ ನೀರಿನ ಮಟ್ಟ ಸಂಗ್ರಹಣಾ ಸಾಮರ್ಥ್ಯದ ಜಲಾಶಯದಲ್ಲಿ 175 ಅಡಿ ನೀರು ಸಂಗ್ರಹವಾಗಿದೆ. ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ 50 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ.
ಭದ್ರಾ ಬಲದಂಡೆ ಹಾಗೂ ಎಡದಂಡೆಗೆ ಕೃಷಿ ಚಟುವಟಿಕೆ ಸಲುವಾಗಿ ಅಗತ್ಯ ಪ್ರಮಾಣದ ನೀರು ಹರಿಸುವ ಸಂಬಂಧ ಜುಲೈ 30ರ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭದ್ರಾ ಕಾಡಾ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.