ಶಿಕಾರಿಪುರ: ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಸೋಲು– ಗೆಲುವಿನ ಲೆಕ್ಕಾಚಾರ ವಿಚಾರ ತಾಲ್ಲೂಕಿನಲ್ಲಿ ಬಹು ಚರ್ಚೆಗೆ ಒಳಗಾಗುತ್ತಿದ್ದು, ರೈತರು ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಬಗ್ಗೆ ಟ್ರ್ಯಾಕ್ಟರ್ ಪಣಕಿಟ್ಟಿದ್ದಾರೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೆಲವು ದಿನಗಳ ಹಿಂದೆ ತಾಲ್ಲೂಕಿನ ಕಲ್ಮನೆ ಗ್ರಾಮದ ರೈತ ರವೀಂದ್ರ ಅವರು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸವಾಲು ಹಾಕಿ ಟ್ರ್ಯಾಕ್ಟರ್ ಪಣಕಿಟ್ಟಿದ್ದರು. ಈಗ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಪಟ್ಟಣದ ಬಿಜೆಪಿ ಕಾರ್ಯಕರ್ತ ಹಾಗೂ ರೈತ ಜಮೀನ್ದಾರ್ ಮಂಜುನಾಥ್ ಟ್ರ್ಯಾಕ್ಟರ್ ಪಣಕಿಟ್ಟು ಸವಾಲು ಹಾಕಿದ್ದಾರೆ.
ಇಬ್ಬರು ತಮ್ಮ ಅಭ್ಯರ್ಥಿಗಳ ಪರ ಟ್ರ್ಯಾಕ್ಟರ್ ಪಣಕಿಟ್ಟು ಸವಾಲ್ ಹಾಕಿರುವ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.