ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಏ. 18ರಂದು ನಾಮಪತ್ರ ಸಲ್ಲಿಸುವೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ನಗರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ಚುನಾವಣೆಗಾಗಿ ಮಾತ್ರ ಮಾತನಾಡುವ ಪಕ್ಷ, ವ್ಯಕ್ತಿ ನಾವಲ್ಲ. ಜನರ ಮಧ್ಯೆ ಇದ್ದು ಅಭಿವೃದ್ಧಿ, ದೇಶದ ರಕ್ಷಣೆ, ಜನಪರ ಯೋಜನೆಗಳ ಚಿಂತನೆ ನಡೆಸುವ ಪಕ್ಷ ಬಿಜೆಪಿ’ ಎಂದರು.
ದೇಶದ ಅಭಿವೃದ್ಧಿಗಾಗಿ ದುಡಿಯುತ್ತಿರುವ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಲು ಕೆಲಸ ಮಾಡುತ್ತಿದ್ದೇವೆ. ಜಿಲ್ಲೆಯ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆ ಅಪಾರ ಎಂದರು.
‘ಹಿಂದೆ ಎಲ್.ಪಿ.ಜಿ. ಸಿಲಿಂಡರ್ ಸಿಗದ ಪರಿಸ್ಥಿತಿ ಇತ್ತು. ಈಗ ಎಲ್ಲೆಂದರಲ್ಲಿ ಸಿಗುತ್ತಿದೆ. ಬಡ ಕುಟುಂಬಕ್ಕೆ ಉಚಿತ ಸಿಲಿಂಡರ್ ಪೂರೈಸುತ್ತಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಉಚಿತ ಲಸಿಕೆ ನೀಡಿ ದೇಶದ ಜನರ ಜೀವ ಉಳಿಸಿದ್ದೇವೆ. ಹಿಂದಿನ 60 ವರ್ಷಗಳಲ್ಲಿ ಕಾಂಗ್ರೆಸ್ ಸಾಧನೆ ಏನು’ ಎಂದು ಪ್ರಶ್ನಿಸಿದರು
ಪಕ್ಷದ ನಾಯಕಿ ಭಾರತಿ ಶೆಟ್ಟಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳ ಜಾರಿಗೆ ತಂದಿದ್ದಾರೆ. ಮಹಿಳಾ ಮೀಸಲಾತಿ, ಸ್ಟಾರ್ಟಪ್ ಯೋಜನೆ, ಜನಧನ್ ಯೋಜನೆ, ವಿಶ್ವಕರ್ಮ ಯೋಜನೆ ಹೀಗೆ ಹತ್ತು ಹಲವು ಕಾರ್ಯಕ್ರಮ ನೀಡಿದ್ದಾರೆ ಎಂದರು.
ವೇದಿಕೆಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಪ್ರಮುಖರಾದ ಜ್ಯೋತಿ ಪ್ರಕಾಶ್, ಮೋಹನ್ ರೆಡ್ಡಿ, ಗಾಯತ್ರಿ, ರಶ್ಮಿ ಶ್ರೀನಿವಾಸ್, ಯಶೋಧಾ, ಸುರೇಖಾ ಮುರಳೀಧರ, ರೇಣುಕಾ, ಅನಿತಾ ರವಿಶಂಕರ್ ಇದ್ದರು.
ಪಕ್ಷದ ಹಿರಿಯರೊಬ್ಬರು ನರೇಂದ್ರ ಮೋದಿ ಅವರ ಭಾವಚಿತ್ರ ಬಳಸಿ ಚುನಾವಣೆಗೆ ನಿಲ್ಲುತ್ತಿದ್ದಾರೆ. ಅದಕ್ಕೆ ಯಾರೂ ತಲೆಕೆಡಿಸಿಕೊಳ್ಳೋದು ಬೇಡ