ಶಿವಮೊಗ್ಗ: ಸೋಗಾನೆಯಲ್ಲಿ ನಿರ್ಮಾಣ ವಾಗುತ್ತಿರುವ ವಿಮಾನನಿಲ್ದಾಣಕ್ಕೆ ‘ಶಾಂತವೇರಿ ಗೋಪಾಲಗೌಡ’ ಹೆಸರಿಡುವಂತೆ ಆಗ್ರಹಿಸಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಒಕ್ಕಲಿಗರ ಒಕ್ಕೂಟ ಹಾಗೂ ಶಾಶ್ವತಿ ಮಹಿಳಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಜಕಾರಣಿಗಳು ಎಂದರೆ, ಭ್ರಷ್ಟರು, ಸುಳ್ಳರು, ಸ್ವಜನಪಕ್ಷ ಪಾತಿಗಳು, ಸ್ವಾರ್ಥಿಗಳು ಎಂಬ ವಾತಾವರಣ ನಿರ್ಮಾಣವಾಗಿದೆ.
ಇದಕ್ಕೆ ವ್ಯತಿರಿಕ್ತವಾಗಿ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಜನಿಸಿದ ಶಾಂತವೇರಿ ಗೋಪಾಲಗೌಡರು ಗೇಣಿ ಪದ್ಧತಿ ವಿರುದ್ಧ ಹೋರಾಟ ನಡೆಸಿ ‘ಉಳುವವನೆ ಭೂಮಿಯ ಒಡೆಯ’ ಕಾನೂನು ಜಾರಿಯಾಗಲು ಪ್ರಮುಖ ಪಾತ್ರ ವಹಿಸಿದರು. ಪರಿಶಿಷ್ಟ ವರ್ಗದವರು, ಹಿಂದುಳಿದವರು, ಶ್ರಮಜೀವಿಗಳು, ಜಮೀನಿನ ಮಾಲೀಕರಾಗಲು ಕಾರಣರಾದವರು. ಸ್ವಾರ್ಥ ರಹಿತ ಕೆಲಸ ಮಾಡಿ ಇಡೀ ದೇಶಕ್ಕೆ ಮಾದರಿಯಾದ ರಾಜಕಾರಣಿಯಾಗಿದ್ದಾರೆ. ಪ್ರಾಮಾಣಿಕ ರಾಜಕಾರಣಿಯಾಗಿದ್ದ ಶಾಂತವೇರಿ ಗೋಪಾಲಗೌಡರ ಹೆಸರನ್ನು ವಿಮಾನನಿಲ್ದಾಣಕ್ಕೆ ಇಡಬೇಕು ಎಂದು ಮನವಿ ಮಾಡಿದರು.