ಭದ್ರಾವತಿ: ‘ಸದಾಶಿವ ಆಯೋಗ ವರದಿ ಮಂಡಿಸುವ ಮೂಲಕ ಸಮುದಾಯಗಳ ನಡುವೆ ದ್ವೇಷ ಪ್ರಚೋದನೆ ಬಿತ್ತಲು ಹೊರಟಿರುವುದು ದುರದೃಷ್ಟಕರ ಬೆಳವಣಿಗೆ’ ಎಂದು ಚಿತ್ರದುರ್ಗ ಮಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು.
ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಶುಕ್ರವಾರ ಅಂಬೇಡ್ಕರ್ ವೃತ್ತದಿಂದ ತಾಲ್ಲೂಕು ಕಚೇರಿವರೆಗೆ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಕೇಂದ್ರ ಹಾಗೂ ರಾಜ್ಯದ ಸಚಿವರು ಈ ವರದಿಯನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸಿರುವುದು ಸರಿಯಲ್ಲ. ಇದರ ವಿರುದ್ಧ ಶೋಷಿತ ಸಮುದಾಯದವರು ಪ್ರತಿಭಟನೆ ನಡೆಸಿದ್ದೇವೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಮಂಡಿಸಿರುವ ಮೀಸಲಾತಿ ಕುರಿತ ವರದಿಯನ್ನುರಾಜ್ಯ ಸರ್ಕಾರ ಮಂಡಿಸಲು ಮುಂದಾಗಲಿ. ಅದು ಬಿಟ್ಟು ಸಮುದಾಯದ ನಡುವೆ ಬೆಂಕಿ ಹೆಚ್ಚುವ ವರದಿಯನ್ನು ಅನುಷ್ಠಾನ ಮಾಡಬಾರದು. ಇದನ್ನು ಖಂಡಿಸಿ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.
ಭೋವಿ ಸಂಸ್ಥಾನ ಮಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಮುಖಂಡ ಡಾ. ರಾಜಾನಾಯ್ಕ, ಕರ್ನಾಟಕ ಅಲೆಮಾರಿ ಮತ್ತಿ ಅಲೆಮಾರಿ ಒಕ್ಕೂಟದ ಅಧ್ಯಕ್ಷ ಕಿರಣ್ ಕುಮಾರ್, ಮೀಸಲಾತಿ ಒಕ್ಕೂಟದ ಅಧ್ಯಕ್ಷ ಪ್ರೇಮಕುಮಾರ್ ಅರಳಿಕೊಪ್ಪ, ಉಪಾಧ್ಯಕ್ಷ ವೀರಭದ್ರಪ್ಪ ಪೂಜಾರಿ, ನಾನ್ಯಾನಾಯ್ಕ, ರವಿ ಭಾಗವಹಿಸಿದ್ದರು.