ಅಂಬ್ಲಿಗೊಳ್ಳ (ಶಿಕಾರಿಪುರ): ತಾಲ್ಲೂಕಿನ ಸಮಗ್ರ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ತಾಲ್ಲೂಕಿನ ಅಂಬ್ಲಿಗೊಳ್ಳ ಜಲಾಶಯಕ್ಕೆ ಶನಿವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಜನರ ಹಾಗೂ ರೈತರ ಅನುಕೂಲಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ₹ 150 ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆ ಅನುಷ್ಠಾನ ಮಾಡಿದ್ದಾರೆ. ತುಂಗಭದ್ರಾ ಜಲಾಶಯದಿಂದ ತಾಲ್ಲೂಕಿಗೆ ನೀರು ತರಲು ಅಕ್ಕ ಪಕ್ಕದ ತಾಲ್ಲೂಕಿನ ರೈತರು ಸಹಕಾರ ನೀಡಿದ್ದಾರೆ. ಸಾಗರ ತಾಲ್ಲೂಕಿನ ಮಳೆಯ ನೀರು ಹರಿದು ಬರುವುದರಿಂದ ಅಂಬ್ಲಿಗೊಳ್ಳ ಜಲಾಶಯ ಭರ್ತಿಯಾಗುತ್ತದೆ. ಆದ್ದರಿಂದ ಆನಂದಪುರ ಜನರಿಗೆ ಕುಡಿಯಲು ಜಲಾಶಯದಿಂದ ನೀರು ನೀಡಲಾಗುತ್ತಿದ್ದು, ತಾಲ್ಲೂಕಿನ ರೈತರು ಆತಂಕ ಪಡಬಾರದು ಎಂದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ‘ತಾಲ್ಲೂಕಿನ ಸಮಗ್ರ ನೀರಾವರಿ ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಆದ್ಯತೆ ನೀಡಿದ್ದಾರೆ. ಜಲಾಶಯ ಅಚ್ಚುಕಟ್ಟು ರೈತರ ಕೃಷಿ ಭೂಮಿಗೆ ತೆರಳಲು ರಸ್ತೆ ನಿರ್ಮಾಣ ಮಾಡಲಾಗಿದೆ. ರೈತರು ಕಾಲುವೆ ಸಮೀಪ ಭೂಮಿ ಒತ್ತುವರಿ ಮಾಡಿ ಬೆಳೆ ಬೆಳೆದ ಪರಿಣಾಮ ಕಾಲುವೆ ಗಳಲ್ಲಿ ಹೂಳು ತುಂಬಿಕೊಂಡಿದ್ದು, ಕಾಲುವೆ ಪಕ್ಕ ಬೆಳೆ ಬೆಳೆಯಬಾರದು. ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಕಾಲುವೆ ಸ್ವಚ್ಛಗೊಳಿಸುವ ಕಾರ್ಯ ಆಗಬೇಕು’ ಎಂದರು.
ಸಾಲೂರು ಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ‘ರಾಜ್ಯದ ಸಮಗ್ರ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಶ್ರಮಿಸಿದ್ದಾರೆ. ಜಾತಿ ಭೇದವಿಲ್ಲದೇ ಎಲ್ಲ ಮಠಗಳಿಗೂ ಅನುದಾನ ನೀಡಿದ್ದಾರೆ. ಯಡಿಯೂರಪ್ಪ ರಾಜೀನಾಮೆ ಸಂದರ್ಭದಲ್ಲಿ ಸಾವಿರಾರು ಸ್ವಾಮೀಜಿಗಳು ಚರ್ಚೆ ನಡೆಸಲು ತೆರಳಿದ್ದೆವು. ಯಾವುದೇ ಕಾಣಿಕೆ ಸ್ವೀಕರಿಸಲು ಹೋಗಿರಲಿಲ್ಲ. ಹಿಂದಿನ ಕಾಲದಲ್ಲಿ ರಾಜನಿಗೆ ಗುರುಗಳು ಮಾರ್ಗದರ್ಶನ ನೀಡುತ್ತಿದ್ದರು. ರಾಜ ಗುರುವಿನ ಆಶ್ರಯದಲ್ಲಿ ಆಡಳಿತ ನಡೆಸುತ್ತಿದ್ದ ಎಂಬುದನ್ನು ನಮ್ಮ ಬಗ್ಗೆ ಟೀಕೆ ಮಾಡಿದವರು ತಿಳಿದುಕೊಳ್ಳಬೇಕು’ ಎಂದು ಹೇಳಿದರು.
ಸಂಸದ ರಾಘವೇಂದ್ರ ಅವರ ಪತ್ನಿ ತೇಜಸ್ವಿನಿ, ಕೆ.ಎಸ್. ಗುರುಮೂರ್ತಿ ಅವರ ಪತ್ನಿ ಅಪರ್ಣ, ಮುಖಂಡರಾದ ಎಂ.ಬಿ. ಚನ್ನವೀರಪ್ಪ, ಭದ್ರಾಪುರ ಹಾಲಪ್ಪ, ಜೆ. ಸುಕೇಂದ್ರಪ್ಪ, ಕಬಾಡಿ ರಾಜಪ್ಪ, ತೊಗರ್ಸಿ ಹನುಮಂತಪ್ಪ, ರುದ್ರಮೂರ್ತಿ, ಚೇತನ್, ವೀರೇಂದ್ರ, ಯುವರಾಜ್, ಚಾರಗಲ್ಲಿ ಪರಶುರಾಮ್ ಇದ್ದರು.