ಶಿವಮೊಗ್ಗ: ಸಾಗರ ರಸ್ತೆಯ ಸರ್ಕಾರಿ ಜಾಗವನ್ನು ಖಾಸಗಿ ಹೋಟೆಲ್ನ ರಸ್ತೆಗೆ ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟ ನಿರ್ಧಾರ ಖಂಡಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿ ಕಾರ್ಯಕರ್ತರು ಮಂಗಳವಾರ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸಾಗರ ರಸ್ತೆಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ತುಂಗಾ ಮೇಲ್ದಂಡೆ ಯೋಜನೆಗೆ ಸೇರಿದ ₹ 45 ಕೋಟಿಗೂ ಹೆಚ್ಚು ಬೆಲೆ ಬಾಳುವ ಜಾಗವನ್ನು ರಸ್ತೆಗಾಗಿ ಬಿಟ್ಟುಕೊಡಲಾಗಿದೆ. ಹಿಂದೆ ₹ 70 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ರಸ್ತೆ, ಚರಂಡಿ, ಸಮುದಾಯ ಭವನದ ಕಾಮಗಾರಿಗಳು ಸಂಪೂರ್ಣವಾಗಿ ಹಾಳಾಗಿವೆ ಎಂದು ಪ್ರತಿಭಟನಾಕಾರರು ದೂರಿದರು.
ಹೋಟೆಲ್ಗೆ ಈ ಮೊದಲೇ ಹೋಗಲು ರಸ್ತೆ ಇದ್ದರೂ, ಇಲಾಖೆ ಜಾಗದಲ್ಲಿ ರಸ್ತೆ ಮಾಡಿಕೊಟ್ಟಿರುವುದು ಏಕೆ? ಅಲ್ಲಿ ಇನ್ನೊಂದು ರಸ್ತೆಯ ಅವಶ್ಯಕತೆ ಇದೆಯೇ? ಈ ಕಾಮಗಾರಿಗೆ ಯಾವ ಹಣ ಬಳಕೆಯಾಗಿದೆ? ಎಷ್ಟು ಬಳಕೆಯಾಗಿದೆ ಎಂದು ಸಾರ್ವಜನಿಕರಿಗೆ ತಿಳಿಸಬೇಕು. ಹೋಟೆಲ್ಗೆ ನೀಡಿದ್ದ ಜಾಗ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಎಂ.ಅಶೋಕ್ ಯಾದವ್, ಮುಖಂಡರಾದ ಬಾಬಣ್ಣ, ಶಿವಕುಮಾರ್ ಕಸಟ್ಟೆ, ವೆಂಕಟನಾರಾಯಣ್, ಶ್ರೀಕಾಂತ್, ಪ್ರೊ.ಕಲ್ಲಣ್ಣ, ನಾಗರಾಜ್, ಪ್ರೊ.ಚಂದ್ರಶೇಖರ್, ಬಾಲಕೃಷ್ಣ ನಾಯ್ಡು, ಸುಬ್ರಮಣ್ಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.