ಶಿವಮೊಗ್ಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಕ್ಷರ ದಾಸೋಹ ನೌಕರರು ಸೋಮವಾರ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನೂತನ ಶಿಕ್ಷಣ ನೀತಿಯನ್ನು ಜಾರಿ ಮಾಡುವಾಗ ಬಿಸಿಯೂಟ ಯೋಜನೆಯನ್ನು ಬಲಿಷ್ಟಪಡಿಸಿ ಈಗಿರುವ ಮಾದರಿಯನ್ನೇ ಮುಂದುವರಿಸಬೇಕು. ಖಾಸಗಿ ಸಂಸ್ಥೆಗಳಿಗೆ ಜವಾಬ್ದಾರಿ ಕೊಡಬಾರದು. ಕೆಲಸದ ಅವಧಿಯನ್ನು 4 ರಿಂದ 6 ಗಂಟೆಗೆವರೆಗೆ ಅಕ್ಷರ ದಾಸೋಹ ಕೈಪಿಡಿಯಲ್ಲಿ ಬದಲಾಯಿಸಬೇಕು ಎಂದು ಒತ್ತಾಯಿಸಿದರು.
ಕೊರೊನಾ ಸಂದರ್ಭದ ವೇತನವನ್ನು ಏಪ್ರಿಲ್ನಿಂದಲೇ ನೀಡಬೇಕು. ಸಮಯಕ್ಕೆ ಸರಿಯಾಗಿ ವೇತನ ಪಾವತಿಸಬೇಕು. ಬಿಸಿಯೂಟ ನೌಕರರನ್ನು ಕೂಡ ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಪ್ರತಿ ಶಾಲೆಯಲ್ಲೂ ಕನಿಷ್ಠ ಇಬ್ಬರು ಅಡುಗೆ ಅವರನ್ನು ನೇಮಿಸಿಕೊಳ್ಳಬೇಕು. ನಿವೃತ್ತಿ ವೇತನ, ಆರೋಗ್ಯ ಸೌಲಭ್ಯ ಒದಗಿಸಬೇಕು. ಕಾಯಂ ಪಿಂಚಣಿ ಒದಗಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದರು.
ನ.26ಕ್ಕೆ ಮುಷ್ಕರ:ನ.26 ರಂದು ದೇಶಾದ್ಯಂತ ಜೆಸಿಟಿಯು ನೇತೃತ್ವದಲ್ಲಿ ಮುಷ್ಕರ ನಡೆಸಲಾಗುವುದು. ಅಂದು ಎಲ್ಲ ಕಾರ್ಮಿಕರು ಕೆಲಸಕ್ಕೆ ರಜೆ ಹಾಕಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎಂದು ನೌಕರರ ಸಂಘದ ಅಧ್ಯಕ್ಷೆ ಅಕ್ಕಮ್ಮ ತಿಳಿಸಿದರು.
ಹನುಮಮ್ಮ, ಎಂ.ನಾರಾಯಣ, ಅನಂತರಾಮು, ತುಳಸಿಪ್ರಭ, ಜಯಮ್ಮ, ನಾಗರತ್ನಾ ಇದ್ದರು.