ಶಿವಮೊಗ್ಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘ, ಅಕ್ಷರ ದಾಸೋಹ ನೌಕರರ ಸಂಘ ಮತ್ತು ಆಶಾ ಕಾರ್ಯಕರ್ತೆಯರ ಸಂಘದಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
‘ಹಲವು ವರ್ಷ ಕಳೆದರೂ ಅಂಗನವಾಡಿ, ಅಕ್ಷರದಾಸೋಹ ಹಾಗೂ ಆಶಾ ಕಾರ್ಯಕರ್ತೆಯರ ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಜೀವನ ಭದ್ರತೆ ಇಲ್ಲವಾಗಿದೆ. ನಮಗೂ ಸಂರಕ್ಷಣೆ, ಮರಣ ಪರಿಹಾರ, ಕನಿಷ್ಠ ವೇತನ ಮತ್ತು ಪಿಂಚಣಿ ಸೌಲಭ್ಯ ನೀಡಬೇಕು’ ಎಂದು ಆಗ್ರಹಿಸಿದರು.
ಮಾಸಿಕ ₹ 10 ಸಾವಿರ ವಿಶೇಷ ಭತ್ಯೆ ನೀಡಬೇಕು. ಕೋವಿಡ್ನಿಂದ ಮೃತಪಟ್ಟವರಿಗೆ ₹ 10 ಲಕ್ಷ ಪರಿಹಾರ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭವಿಷ್ಯನಿಧಿ, ಇಎಸ್ಐ ಸೇರಿ ವಿವಿಧ ಯೋಜನೆಗಳಿಗೆ ಅನುದಾನವನ್ನು ಹೆಚ್ಚಿಗೆ ಬಿಡುಗಡೆ ಮಾಡಬೇಕು.ನಿವೃತ್ತಿ ವೇತನ ನಿಗದಿ ಮಾಡಬೇಕು. ನಿವೃತ್ತಿ ವೇತನ ನಿಗದಿ ಮಾಡುವವರಿಗೂ ₹ 1.5 ಲಕ್ಷ ಇಡುಗಂಟು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಆರ್. ಹನುಮಮ್ಮ, ತುಳಸಿಪ್ರಭ, ವಿಜಯಲಕ್ಷ್ಮೀ, ಭಾಗ್ಯಮ್ಮ, ಅಶ್ವಿನಿ, ತಾರಾ, ಚಂದ್ರಮ್ಮ, ಸುನಿತಾ, ನಾಗರತ್ನ ಇದ್ದರು.