ಸಾಗರ: ‘ನಾವು ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರೂ ಅದರಲ್ಲಿ ಸಮಾಜದ ಪಾಲು ಇರುತ್ತದೆ. ಸಮಾಜವನ್ನು ಮರೆಯುವ ಪ್ರವೃತ್ತಿ ಸರಿಯಲ್ಲ’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಇಲ್ಲಿನ ಆರ್ಯ ಈಡಿಗರ ಸಭಾಭವನದಲ್ಲಿ ಪ್ರಾಂತ್ಯ ಆರ್ಯ ಈಡಿಗರ ಸಂಘ ಎಚ್. ಚನ್ನಪ್ಪ ಬಂಗಾರಮ್ಮ ಹುಣಸೆಕಟ್ಟೆ ಶಿಕಾರಿಪುರ ಇವರ ದತ್ತಿನಿಧಿಯಿಂದ ಶನಿವಾರ ಏರ್ಪಡಿಸಿದ್ದ ಹೆಚ್ಚು ಅಂಕ ಗಳಿಸಿದ ಈಡಿಗ ಸಮಾಜದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಯಾವುದೇ ವ್ಯಕ್ತಿ ದೊಡ್ಡ ಪದವಿ ಗಳಿಸಿ ಹುದ್ದೆಗೆ ಏರಿದ ಮಾತ್ರಕ್ಕೆ ಸಮುದಾಯದಿಂದ ಬೇರೆಯಾಗಿ ತನ್ನನ್ನು ನೋಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬಾರದು. ನಾನು ಕೂಡ ಸಮುದಾಯದ ಒಂದು ಭಾಗ ಎಂಬ ಭಾವನೆ ಅಗತ್ಯ’ ಎಂದರು.
ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ಈಡಿಗ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈಡಿಗರ ಸಂಘದ ಪ್ರಮುಖರಾದ ಎಂ. ಹಾಲಪ್ಪ ಮೆಳವರಿಗೆ, ಟಿ. ರಘುಪತಿ, ಎಚ್.ಆರ್. ರವಿಕುಮಾರ್, ಬರೂರು ನಾಗರಾಜ್ ಇದ್ದರು.