ಶಿವಮೊಗ್ಗ: ಸೋಗಾನೆ ವಿಮಾನನಿಲ್ದಾಣಕ್ಕೆ ಶಿವಪ್ಪನಾಯಕರ ಹೆಸರಿಡಬೇಕು ಎಂದು ಒತ್ತಾಯಿಸಿ ರಾಜ್ಯ ನಾಗರಿಕ ರಕ್ಷಣಾ ಸಮಿತಿ ಕಾರ್ಯಕರ್ತರು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಕರ್ನಾಟಕದ ಇತಿಹಾಸದಲ್ಲಿ ವಿಜಯನಗರ ಅರಸರ ಸಾಮಂತರಾಗಿದ್ದ ಇಕ್ಕೇರಿ ಅರಸರ ರಾಜಧಾನಿ ಶಿವಮೊಗ್ಗದ ಕೆಳದಿಯಾಗಿತ್ತು. ಈ ಕೆಳದಿ ಅರಸರಲ್ಲಿ ಶಿವಪ್ಪ ನಾಯಕ ಪ್ರಮುಖ ದೊರೆ. ಅವರು ಪೋರ್ಚುಗೀಸರು ಹಾಗೂ ಬ್ರಿಟಿಷರ ಮೇಲೂ ಗೆಲುವು ಸಾಧಿಸಿದ್ದರು. ಅವರ ರಾಜ್ಯ ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಕೇರಳದ ಉತ್ತರ ಭಾಗಗಳನ್ನು ಒಳಗೊಂಡಿತ್ತು. ಹಾಗಾಗಿ, ವಿಮಾನನಿಲ್ದಾಣಕ್ಕೆ ಅವರ ಹೆಸರಿಡುವ ಮೂಲಕ ಗೌರವಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ಮಹಿಳಾ ಅಧ್ಯಕ್ಷೆ ಉಷಾ ಉತ್ತಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಾಘವೇಂದ್ರ, ಖಜಾಂಚಿ ಶಿವಮೊಗ್ಗ ವಿನೋದ್, ಮಲ್ಲೇಶಪ್ಪ, ರುದ್ರೇಶ್, ವೆಂಕಟೇಶ್, ಚಂದನ್, ಶ್ರೀಧರ್, ಅರುಣ್, ಹರ್ಷಿತ್, ಅಜಿತ್ ಮನವಿ ಸಲ್ಲಿಸಿದರು.