ಶಿವಮೊಗ್ಗ: ನಗರ ರೈಲ್ವೆ ಕಾಂಪೌಂಡ್ನಿಂದ ಹೊಸಪೇಟೆ-ಶಿವಮೊಗ್ಗ ರಸ್ತೆ ಸಂಪರ್ಕಿಸುವ 100ಅಡಿ ವರ್ತುಲ ರಸ್ತೆಯ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಶುಕ್ರವಾರ ಪರಿಶೀಲಿಸಿದರು.
ರಸ್ತೆಯ ಎರಡು ಬದಿ 750ಮೀಟರ್ ಕಾಂಕ್ರೀಟ್ ಚತುಷ್ಪಥ ರಸ್ತೆ, ಎರಡೂ ಬದಿ ಬಾಕ್ಸ್ ಚರಂಡಿ ನಿರ್ಮಾಣ, ರೈಲುನಿಲ್ದಾಣಕ್ಕೆ ಸಂಪರ್ಕಿಸುವ 100ಮೀಟರ್ ಸಿಸಿ ರಸ್ತೆ ನಿರ್ಮಾಣ. ರೈಲು ನಿಲ್ದಾಣದಿಂದ ಹೊರಗೆ ಹೋಗಲು 400 ಮೀಟರ್ ಡಾಂಬರ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ವಿವರ ನೀಡಿದರು.
ರಸ್ತೆ ನಿರ್ಮಾಣಕ್ಕೆ ಅಡ್ಡಲಾಗಿರುವ ವಸತಿಗೃಹಗಳ ಭೂಸ್ವಾಧೀನಕ್ಕಾಗಿ ರೈಲ್ವೆ ಇಲಾಖೆಗೆ ಈಗಾಗಲೇ ₹ 2.36 ಕೋಟಿ ಪಾವತಿಸಲಾಗಿದೆ. ಸದರಿ ಕಟ್ಟಡಗಳನ್ನು ಲೋಕೋಪಯೋಗಿ ಇಲಾಖೆ ಸ್ವಾಧೀನಕ್ಕೆ ನೀಡಲಾಗಿದೆ. ಖಾಸಗಿ ಒಡೆತನದ ಒಟ್ಟು 14 ವಸತಿಗೃಹಗಳ ಭೂಸ್ವಾಧೀನ ಪ್ರಕ್ರಿಯೆಗಾಗಿ ₹3.78 ಕೋಟಿ ಪಾವತಿಸಲು ಉಪ ವಿಭಾಗಧಿಕಾರಿ ಸೂಚಿಸಿದ್ದಾರೆ. ಈಗಾಗಲೇ ₹2.40 ಕೋಟಿ ಪಾವತಿಸಲಾಗಿದೆ. ಮೆಸ್ಕಾಂ ಜಾಗದ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ರಸ್ತೆ ನಿರ್ಮಾಣಕ್ಕೆ ಅಡ್ಡಲಾಗಿರುವ ವಿದ್ಯುತ್ ಕಂಬಗಳ ತೆರವು ಪ್ರಕ್ರಿಯೆ ಆರಂಭಿಸಬೇಕು. ಯುಜಿಡಿ ಪೈಪ್ಲೈನ್ ಸ್ಥಳಾಂತರಿಸುವ ಕಾಮಗಾರಿಗೆ ₹28 ಲಕ್ಷ ಒದಗಿಸಲಾಗಿದೆ. ನೀರು ಸರಬರಾಜು ಕೊಳವೆಗಳ ಸ್ಥಳಾಂತರಕ್ಕಾಗಿ ₹18.50 ಲಕ್ಷ ಪಾವತಿಸಲಾಗಿದೆ. ಭೂಸ್ವಾಧೀನ ಪಡಿಸಿಕೊಂಡ ರೈಲ್ವೆ ಇಲಾಖೆ, ಖಾಸಗಿ ವಸತಿಗೃಹ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತಿದೆ ಎಂದು ವಿವರ ನೀಡಿದರು.